ಬೆಂಗಳೂರು, ಜ.27- ಕೇಂದ್ರ ಸರ್ಕಾರ ಉದ್ಯಮಿಗಳಾದ ಅದಾನಿ , ಅಂಬಾನಿಯವರಿಗೆ ಗುಲಾಮರಾಗಿದ್ದು, ಅದಕ್ಕಾಗಿಯೇ ರೈತರ ಪ್ರತಿಭಟನೆಯನ್ನು ದಿಕ್ಕು ತಪ್ಪಿಸುವ ಸಾಕಷ್ಟು ಸರ್ಕಸ್ಗಳನ್ನು ನಡೆಸುತ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಬಿಸಿಲು, ಮಳೆ ಎನ್ನದೆ ಎರಡು ತಿಂಗಳಿನಿಂದ ಪ್ರತಿಭಟನೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ 56 ಇಂಚಿನ ಎದೆ ಇದ್ದರೆ ಸಾಲದು. ಅದರ ಒಳಗೆ ಹೃದಯ ಇರಬೇಕು ಎಂದು ಲೇವಡಿ ಮಾಡಿದರು.
ನಿನ್ನೆ ದೆಹಲಿಯಲ್ಲಿ ಟ್ರ್ಯಾಕ್ಟರ್ ರ್ಯಾಲಿ ನಡೆದ ವೇಳೆ ಖಲಿಸ್ತಾನದಿಂದ ಬಂದಿದ್ದರು ಎಂದು ಹೇಳಲಾಗಿದೆ. ಆದರೆ ಕೇಂದ್ರ ಸರ್ಕಾರ ಖಲಿಸ್ತಾನದಿಂದ ಯಾರು ಬಂದಿದ್ದರು ಎಂದು ಸ್ಪಷ್ಟಪಡಿಸಬೇಕು. ಕಾಟಾಚಾರಕ್ಕೆ ಪ್ರತಿಭಟನಾ ನಿರತ ರೈತರ ಜತೆ 11 ಸಭೆಗಳನ್ನು ಮಾಡಿದ್ದಾರೆ. ಕಾಯ್ದೆ ಬೇಡ ಎಂದು ರೈತರೇ ಹೇಳಿದ ಮೇಲೆ ಅವುಗಳನ್ನು ಜಾರಿಗೊಳಿಸುವ ಹಠ ಏಕೆ? ಉದ್ಯಮಿಗಳಾದ ಅದಾನಿ, ಅಂಬಾನಿ ಅವರಿಗೆ ಮಾತು ಕೊಟ್ಟಿರುವುದರಿಂದಾಗಿ ಕೇಂದ್ರ ಸರ್ಕಾರ ನಾನಾ ರೀತಿಯ ಸರ್ಕಸ್ಗಳನ್ನು ಮಾಡುತ್ತಿದೆ ಎಂದು ಆರೋಪಿಸಿದರು.