ಬೆಂಗಳೂರು: 2010-11ರಲ್ಲಿ ನಡೆದಿದ್ದ ಡಿನೋಟಿಫೈ ಪ್ರಕರಣ ಸಂಬಂಧ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಸಚಿವ ಮುರುಗೇಶ್ ನಿರಾಣಿ ವಿರುದ್ಧ ದೂರು ದಾಖಲಾಗಿತ್ತು. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅಕ್ರಮ ಡಿನೋಟಿಫಿಕೇಷನ್ ಪ್ರಕರಣವನ್ನು ತನಿಖೆಗೆ ವಹಿಸಿ ಹೈಕೋರ್ಟ್ ಆದೇಶ ನೀಡಿತ್ತು. ಈ ಆದೇಶ ಪ್ರಶ್ನಿಸಿ ಸಿಎಂ ಯಡಿಯೂರಪ್ಪ ಹಾಗೂ ಸಚಿವ ಮುರುಗೇಶ್ ನಿರಾಣಿ ಅವರು ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಇಂದು ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಎಸ್ಎ ಬೋಬ್ಡೆ, ನ್ಯಾಯಮೂರ್ತಿ ಎಎಸ್ ಬೋಪಣ್ಣ, ನ್ಯಾಯಮೂರ್ತಿ ವಿ. ರಾಮಸುಬ್ರಹ್ಮಣ್ಯಂ ಅವರ ನ್ಯಾಯಪೀಠ ಪ್ರಕರಣದ ತನಿಖೆಗೆ ಗ್ರೀನ್ ಸಿಗ್ನಲ್ ನೀಡಿತು.
ಈ ವಿಚಾರವಾಗಿ ಇಂದು ವಿಕಾಸಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಗಣಿ ಸಚಿವ ಮುರುಗೇಶ್ ನಿರಾಣಿ, ಕೋರ್ಟ್ ನಲ್ಲಿ ಈ ಪ್ರಕರಣ ನಡೆಯುತ್ತಿದೆ. ಕೋರ್ಟ್ ನಲ್ಲಿ ಈ ಪ್ರಕರಣ ಇರುವುದರಿಂದ ಹೆಚ್ಚು ಮಾತನಾಡಲ್ಲ ಎಂದು ಹೇಳಿದರು.ದೂರುದಾರ ಉದ್ಯಮಿ ಆಲಂ ಪಾಷಾ ಬಗ್ಗೆ ಪ್ರಶ್ನೆ ಕೇಳಿದಾಗ ಅವನ ಬಗ್ಗೆ ಯಾಕೆ ಕೇಳ್ತೀರಾ? ಆ ಪ್ರಕರಣದಲ್ಲಿ ನನಗೆ ನ್ಯಾಯ ಸಿಗುತ್ತೆ. ಅವರ ಆರೋಪದಲ್ಲಿ ಹುರುಳಿಲ್ಲ. ನಾನು 25 ವರ್ಷಗಳಿಂದ ರಾಜಕೀಯದಲ್ಲಿ ಇದ್ದೀನಿ. 500 ಟನ್ ನಿಂದ 75 ಸಾವಿರ ಟನ್ ನಷ್ಟು ಸಕ್ಕರೆ ಉತ್ಪಾದನೆ ಮಾಡುತ್ತಿದ್ದೇನೆ. 75 ಸಾವಿರ ಜನರಿಗೆ ಕೆಲಸ ಕೊಟ್ಟಿದ್ದೇನೆ. ಪ್ರತಿ ಹಂತದಲ್ಲೂ ನನ್ನನ್ನು ವಿರೋಧ ಮಾಡುವವರು ಇರುತ್ತಾರೆ. ವಿರೋಧ ಮಾಡದೇ ಈ ಹಂತಕ್ಕೆ ಬರಲು ಸಾಧ್ಯವೇ? ಆನೆ ಹೋಗುವಾಗ ನಾಯಿಗಳು ಬೊಗಳುವುದು ಸಹಜ. ಸರ್ಕಾರದಿಂದ ಹಾಗೂ ನನ್ನಿಂದ ಅವರಿಗೆ ಅನ್ಯಾಯ ಆಗಿಲ್ಲ ಎಂದು ಉದ್ಯಮಿ ಆಲಂ ಪಾಷ ವಿರುದ್ಧ ನಿರಾಣಿ ವಾಗ್ದಾಳಿ ನಡೆಸಿದರು.