ನವದೆಹಲಿ,ಜ.26- ಎಪ್ಪತ್ತೆರಡನೆ ಗಣರಾಜ್ಯೋತ್ಸವ ಸಂಭ್ರಮಾಚರಣೆ ನಡುವೆ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿಯಲ್ಲಿ ರೈತರು ಟ್ರ್ಯಾಕ್ಟರ್ ರ್ಯಾಲಿ ನಡೆಸಿದರೆ, ದೇಶದ ನಾನಾ ಭಾಗಗಳಲ್ಲಿ ಬೃಹತ್ ರೈತ ಹೋರಾಟಗಳು ನಡೆದವು. ರಾಷ್ಟ್ರ ರಾಜಧಾನಿ ನವದೆಹಲಿ, ಎಲ್ಲಾ ರಾಜ್ಯಗಳ ರಾಜಧಾನಿಗಳು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಪಥಸಂಚಲನ ನಡೆಯಿತು. ಅದೇ ಸಂದರ್ಭದಲ್ಲಿ ರೈತರು ಗಣರಾಜ್ಯೋತ್ಸವಕ್ಕೆ ಪರ್ಯಾಯವಾಗಿ ರೈತ ಹೋರಾಟಗಳನ್ನು ನಡೆಸಿದರು. ಸೇನೆ ಮತ್ತು ಸಶಸ್ತ್ರ ಪಡೆಗಳ ಪರೇಡ್ಗೆ ಪರ್ಯಾಯವಾಗಿ ಟ್ರ್ಯಾಕ್ಟರ್ ರ್ಯಾಲಿಗಳು ನಡೆದವು.
ದೆಹಲಿಯ ಗಡಿ ಭಾಗಗಳ ಸುತ್ತಲೂ ಟ್ರ್ಯಾಕ್ಟರ್ಗಳ ಪರೇಡ್ ಭಾರೀ ಸದ್ದು ಮಾಡಿದವು. ಕೆಲವೊಮ್ಮೆ ಪೊಲೀಸರ ಸೂಚನೆಗಳನ್ನು ಉಲ್ಲಂಘಿಸಿದ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಅಶ್ರುವಾಯು ಸಿಡಿಸಿ ಲಾಠಿಚಾರ್ಜ್ ಮಾಡಲಾಯಿತು. ದೆಹಲಿಯ ಪಾಂಡವನಗರದ ಮೀರತ್ಎಕ್ಸ್ಪ್ರೆಸ್ವೇ ಬಳಿ ಸಾವಿರಾರು ಸಂಖ್ಯೆಯಲ್ಲಿದ್ದ ರೈತರು ಬ್ಯಾರಿಕೇಡ್ಗಳನ್ನು ತಳ್ಳಿ ನುಗ್ಗಲು ಯತ್ನಿಸಿದಾಗ ಅವರನ್ನು ನಿಯಂತ್ರಿಸಲು ಲಾಠಿ ಪ್ರಹಾರ ನಡೆಸಲಾಗಿದೆ.
ಸಿಂಗು ಗಡಿಯ ಸಂಜಯ್ಗಾಂಧಿಯ ಟ್ರಾನ್ಸ್ಪೋರ್ಟ್ನಗರದಲ್ಲಿ ಮತ್ತು ಘಾಜಿಪುರ್ ಗಡಿಯಲ್ಲಿ ಅಶ್ರುವಾಯು ಸಿಡಿಸಿ ರೈತರನ್ನು ನಿಯಂತ್ರಿಸುವ ಪ್ರಯತ್ನಗಳು ನಡೆದಿವೆ. ಕಲಂ ಬೈಪಾಸ್ನಲ್ಲಿ ಪೊಲೀಸರ ಅಶ್ವದಳದ ಭದ್ರತೆ, ಬ್ಯಾರಿಕೇಡ್ಗಳನ್ನು ಭೇದಿಸಿ ರೈತರು ಪ್ರತಿಭಟನೆ ಮುಂದುವರೆಸಿದ್ದಾರೆ.