ಮಂಡ್ಯ: ಸ್ಮಶಾನಕ್ಕಾಗಿ ಆಗ್ರಹಿಸಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕಾರೇಕುರ ಗ್ರಾಮಸ್ಥರು ತಹಶೀಲ್ದಾರ್ ಕಚೇರಿ ಎದುರು ಶವವಿಟ್ಟು ಪ್ರತಿಭಟನೆ ನಡೆಸಿದ ಘಟನೆ ಜರುಗಿದೆ.
ಕಾರೇಕುರ ಗ್ರಾಮದ ಪುಟ್ಟಮ್ಮ ಎಂಬವರು ಅನಾರೋಗ್ಯಕ್ಕೆ ತುತ್ತಾಗಿ ಸೋಮವಾರ ಮೃತಪಟ್ಟಿದ್ದರು. ಐದಾರು ದಶಕಗಳಿಂದ ಅಂತ್ಯಸಂಸ್ಕಾರ ನಡೆಸುತ್ತಿದ್ದ ಬೆಳಗೋಳ ಗ್ರಾಮ ವ್ಯಾಪ್ತಿಯ ಸರ್ವೆ ನಂ. 342ರ ಜಾಗದಲ್ಲಿ ಅಂತ್ಯಕ್ರಿಯೆ ನಡೆಸಲು ಮುಂದಾದಾಗ ಥಾಮಸ್ ಮ್ಯಾಥ್ಯೂ ಎಂಬವರು ತಡೆದಿದ್ದಾರೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಶವವನ್ನು ಶ್ರೀರಂಗಪಟ್ಟಣ ತಹಶೀಲ್ದಾರ್ ಕಚೇರಿ ಬಳಿಗೆ ತಂದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮದಲ್ಲಿ ಯಾರೇ ಮೃತಪಟ್ಟರೂ ಸರ್ವೇ ನಂ.342 ಜಾಗದಲ್ಲೇ ಅಂತ್ಯಸಂಸ್ಕಾರ ಮಾಡಿಕೊಂಡು ಬರಲಾಗುತ್ತಿತ್ತು. ಅಲ್ಲದೆ ಕೆಲವು ವರ್ಷಗಳ ಹಿಂದೆ ಥಾಮಸ್ ಮ್ಯಾಥ್ಯೂ ಎಂಬಾತ ಸ್ಮಶಾನದ ಜಾಗ ತನ್ನದೆಂದು ಆಕ್ರಮಿಸಿಕೊಳ್ಳಲು ಮುಂದಾಗಿದ್ದರು. ಆ ವೇಳೆ ನ್ಯಾಯಾಲಯದ ಮೊರೆ ಹೋದಾಗ ಗ್ರಾಮಸ್ಥರ ಪರವಾಗಿ ತೀರ್ಪು ಬಂದಿತ್ತು. ನ್ಯಾಯಾಲಯದ ತೀರ್ಪಿಗೆ ಆತ ತಡೆಯಾಜ್ಞೆ ತಂದಿದ್ದು, ಶವ ಸಂಸ್ಕಾರಕ್ಕೆ ಅಡ್ಡಿಪಡಿಸುತ್ತಿದ್ದಾನೆ. ಇನ್ನು ಅಧಿಕಾರಿಗಳು ಈ ಹಿಂದೆ ಸ್ಮಶಾನ ಜಾಗದ ಸಮಸ್ಯೆ ಇತ್ಯರ್ಥ ಮಾಡುವುದಾಗಿ ಭರವಸೆ ನೀಡಿದ್ದರು. ಇದೀಗ ಆತನೊಂದಿಗೆ ಶಾಮೀಲಾಗಿ ಬೇರೆ ಜಾಗ ನೀಡುವುದಾಗಿ ಹೇಳುತ್ತಿದ್ದಾರೆ. ಅದೇ ಜಾಗದಲ್ಲೇ ಅಂತ್ಯಸಂಸ್ಕಾರ ಮಾಡಲು ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ.