ಬಾಗಲಕೋಟೆ: ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮದ ಬಳಿ ಇರುವ ನೂತನ ಸಚಿವ ಮುರುಗೇಶ್ ನಿರಾಣಿ ಒಡೆತನದ ಕೇದಾರನಾಥ ಸಕ್ಕರೆ ಕಾರ್ಖಾನೆ ಉದ್ಘಾಟನೆಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಇಂದು ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಈ ಕಾರ್ಯಕ್ರಮದ ಬಗ್ಗೆ ಮಾಧ್ಯಮಗಳಿಗೆ ಹೇಳುವಾಗ ನೂತನ ಸಚಿವ ಮುರುಗೇಶ್ ನಿರಾಣಿ ಸಿಡಿ ವಿಚಾರವೊಂದನ್ನು ಪ್ರಸ್ತಾಪಿಸಿ ಕುತೂಹಲ ಮೂಡಿಸಿದರು. ಆದರೆ, ಐದು ನಿಮಿಷದ ಸಿಡಿ ಬಿಡುಗಡೆ ಇರುತ್ತೆ, ‘ಆ ಸಿಡಿ’ ಅಲ್ಲ ಎಂದು ಸಚಿವ ಮುರುಗೇಶ್ ನಿರಾಣಿ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಎಂಆರ್ ಎನ್ ನಿರಾಣಿ ಉದ್ದಿಮೆ ಸಮೂಹ ಸಂಸ್ಥೆಗಳ ಸಮಗ್ರ ಸಾಧನಾ ಮಾಹಿತಿಯಿರುವ ವಿಡಿಯೋ ಸಿಡಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ ಬಳಿಕ ಅವರು ನಸುನಕ್ಕು, ಆ ಸಿಡಿ ಅಲ್ಲ ಎಂದು ಮಾತು ಮುಂದುವರಿಸಿದರು. ಕೇದಾರನಾಥ್ ಸಕ್ಕರೆ ಕಾರ್ಖಾನೆಯಲ್ಲಿ ನಡೆಯುವ ವಿವಿಧ ಕಾಮಗಾರಿಗಳ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದ ಅವರು, ಯತ್ನಾಳ್ ಅವರ ಸಿಡಿ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.ಪಕ್ಷ ಯಾವುದೇ ಖಾತೆ ಕೊಟ್ಟಿರೂ ರಾಜ್ಯ, ದೇಶಕ್ಕೆ ಹೆಸರು ತರುವ ಹಾಗೆ ನಿರ್ವಹಿಸುವೆ. ಎಲ್ಲಾ ಆಕಾಂಕ್ಷಿಗಳಿಗೆ ಖಾತೆ ಕೊಟ್ಟು ಯಾವುದು ಉಳಿಯುತ್ತೆ ಆ ಖಾತೆ ಕೊಟ್ಟರೆ ಸಂತೋಷವೆಂದರು. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಖಾತೆ ನಿರೀಕ್ಷೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಆ ಹುಡುಗಿಗೆ ಮದುವೆಯಾಗಿದೆ ಎಂದು ಖಾತೆಯನ್ನು ಹುಡುಗಿಗೆ ಹೋಲಿಸಿ ನಗೆ ಚಟಾಕಿ ಹಾರಿಸಿದರು. ಹಾಗಾದರೆ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ಗೆ ಡೈವೋರ್ಸ್ ಕೊಡಿಸ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ, ಸಚಿವ ಜಗದೀಶ್ ಶೆಟ್ಟರ್ ಹಿರಿಯರು, ಒಳ್ಳೆಯ ಕೆಲ್ಸ ಮಾಡುತ್ತಿದ್ದಾರೆ. ನಾನು ಹಿಂದೆ ಆ ಖಾತೆ ನಿಭಾಸಿದ್ದೇನೆ. ಅವರು ಸಲಹೆ ಕೇಳಿದ್ರೆ ಕೊಡುವೆ. ನನಗೆ ಯಾವುದು ಖಾತೆ ಸಿಗುತ್ತೋ, ಹಿಂದೆ ಆ ಖಾತೆ ನಿಭಾಯಿಸಿದವರಿಂದ ಸಲಹೆ ಪಡೆಯುವೆ ಎಂದು ಮುರುಗೇಶ್ ನಿರಾಳಿ ಸ್ಪಷ್ಟಪಡಿಸಿದರು.