ವಿಜಯಪುರ; ತಮಗೆ ನೀಡಲಾಗಿದ್ದ ಭದ್ರತೆ ಹಿಂಪಡೆದ ವಿಚಾರವಾಗಿ ಯತ್ನಾಳ ಅವರು ಸಿಎಂ ಯಡಿಯೂರಪ್ಪ ವಿರುದ್ಧ ಫುಲ್ ಗರಂ ಆಗಿದ್ದಾರೆ. ವಿಜಯಪುರ ನಗರದ ಹೊರವಲಯದಲ್ಲಿ ಭೂತನಾಳ ಕೆರೆಯ ಪಕ್ಕದಲ್ಲಿರುವ ಕುಡಿಯುವ ನೀರಿನ ನೂತನ ಘಟಕ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನಾವು ಅಭಿವೃದ್ದಿ ಬಗ್ಗೆ ಮಾತನಾಡಿದ್ದಕ್ಕೆ ನನಗೆ ನೀಡಿದ್ದ ಭದ್ರತೆ ಹಿಂಪಡೆದಿದ್ದಾರೆ. ನಾವು ಕೇಳಿದರೆ ಹಣ ಇಲ್ಲ ಅಂತಾರೆ. ಆದರೆ, ಜಮೀರ ಅಹ್ಮದ್ ಖಾನ್ ಕೇಳಿದರ ಹಣ ನೀಡುತ್ತಾರೆ. ನಾಲ್ಕೈದು ಜನ ಕಾಂಗ್ರೆಸ್ ಶಾಸಕರಿಗೆ ಹೆಚ್ಚಿನ ಅನುದಾನ ನೀಡಿದ್ದಾರೆ. ಈ ಬಗ್ಗೆ ವಿಧಾನ ಮಂಡಲ ಅಧಿವೇಶನದಲ್ಲಿ ಪ್ರಶ್ನೆ ಮಾಡುತ್ತೇನೆ. ಬಿಜೆಪಿ ಶಾಸಕನಾದ ನನಗೆ ರೂ. 100 ಕೋಟಿ ನೀಡಲಿಲ್ಲ. ಜಮೀರ್ ಅಹ್ಮದ್ ಖಾನ್ ಗೆ ರೂ. 200 ಕೋಟಿ ನೀಡಿದ್ದಾರೆ. ಅವನು ಹಿಂದುಗಳನ್ನು ನಾಶ ಮಾಡುತ್ತಾನೆ. ಸಬ್ ಕೋ ಖತಂ ಕರೆಂಗೆ ಎಂದಿದ್ದಕ್ಕೆ ಅನುದಾನ ನೀಡುತ್ತಾರೆ. ಹಿಂದುಗಳ ಪರ ಮಾತನಾಡುವವರಿಗೆ ಭದ್ರತೆ ಹಿಂಪಡೆದಿದ್ದಾರೆ ಎಂದು ಕಿಡಿ ಕಾರಿದರು.
ಹಿಂದುಗಳನ್ನು ವಿರೋಧಿಸುವವರಿಗೆ 200 ಕೋಟಿ ರೂ. ನೀಡ್ತಾರೆ. ರಾಮ, ಸೀತೆ, ಬ್ರಹ್ಮ, ಸರಸ್ವತಿ, ಬಗ್ಗೆ ಹಿಂದೂ ದೇವಾನು ದೇವತೆಗಳ ಬಗ್ಗೆ ಅಪಮಾನ ಮಾಡಿದವರಿಗೆ ಸಚಿವ ಸ್ಥಾನ ನೀಡ್ತಾರೆ ಎಂದು ಯತ್ನಾಳ ಇದೇ ಸಂದರ್ಭದಲ್ಲಿ ವಾಗ್ದಾಳಿ ನಡೆಸಿದರುಅತೃಪ್ತ ಶಾಸಕರು ಅಮಿತ್ ಶಾ ಭೇಟಿ ಬಗ್ಗೆ ಗೊತ್ತಿಲ್ಲ. ನಾನು ಸೋಮವಾರ ಬೆಂಗಳೂರಿಗೆ ಹೋಗುತ್ತಿದ್ದೇನೆ. ಮಂಗಳವಾರ ಯಾರನ್ನು ಭೇಟಿಯಾಗಬೇಕು ಎಂಬುದರ ಬಗ್ಗೆ ಚಿಂತಿಸುತ್ತೇನೆ ಎಂದು ತಿಳಿಸಿದರು.
ಜಗದೀಶ ಶೆಟ್ಟರ್, ಕೆ.ಎಸ್. ಈಶ್ವರಪ್ಪ ವಿರುದ್ಧವೂ ವಾಗ್ದಾಳಿ
ಇದೇ ಸಿಎಂ ವಿರುದ್ಧ ತಾವು ಹೇಳಿಕೆ ನೀಡಿದ ಬಳಿಕ ಸಚಿವ ಜಗದೀಶ ಶೆಟ್ಟರ್ ನೀಡಿರುವ ಪ್ರತಿಕ್ರಿಯೆ ಬಗ್ಗೆಯೂ ಯತ್ನಾಳ ಖಾರವಾಗಿ ಪ್ರತಿಕ್ರಿಯೆ ನೀಡಿದರು. ಜಗದೀಶ ಶೆಟ್ಟರ್ ಅವರಂತೆ ನಾನೇನು ಕೀಳು ರಾಜಕಾರಣ ಮಾಡುವುದಿಲ್ಲ. ನಾನೇನು ಸಿಎಂ ಆದ ಬಳಿಕ ಸಚಿವನಾಗಿಲ್ಲ. ಅವರು ಸಚಿವರಾಗುವ ಅವಶ್ಯಕತೆ ಇರಲಿಲ್ಲ. ಯುವಕರಿಗೆ ಅವಕಾಶ ನೀಡಬಹುದಿತ್ತು. ನಾನ್ಯಾರ ಬಳಿಯೂ ಸಚಿವ ಸ್ಥಾನ ನೀಡುವಂತೆ ಕೇಳಿಲ್ಲ. ಶೆಟ್ಟರ್ ಸುಮ್ಮನೆ ನನ್ನ ಬಗ್ಗೆ ಮಾತನಾಡಬಾರದು. ನನ್ನ ಬಳಿ ಬಹಳ ಜನರ ಇತಿಹಾಸವಿದೆ ಎಂದು ಎಚ್ಚರಿಕೆ ನೀಡಿದರು