ವಿಜಯಪುರ (ಜ. 13): ಬ್ಲ್ಯಾಕ್ಮೇಲ್ ಮಾಡುವ ಮೂವರಿಗೆ ಮುಖ್ಯಮಂತ್ರಿಗಳು ಸಚಿವ ಸ್ಥಾನವನ್ನು ನೀಡಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ. ಈ ಬಾರಿ ಕೂಡ ಸಚಿವ ಸ್ಥಾನ ಕೈ ತಪ್ಪಿದ ಹಿನ್ನಲೆ ಸಿಎಂ ವಿರುದ್ಧ ಹರಿಹಾಯ್ದ ಅವರು, ಕೆಲವರು ಸಿಡಿ ತೋರಿಸಿ ಹೆದರಿಸಿ, ಸಚಿವ ಸ್ಥಾನ ಪಡೆದಿದ್ದಾರೆ. ಇನ್ನು ಕೆಲವರು ಅಪಾರ ಪ್ರಮಾಣದ ಹಣ ನೀಡಿ ಸಚಿವರಾಗಿದ್ದಾರೆ. ಸಿಎಂಗೆ ನೈತಿಕತೆ ಇದ್ದರೆ ರಾಜೀನಾಮೆ ನೀಡಲಿ ಎಂದು ಸವಾಲ್ ಹಾಕಿದರು. ಪ್ರಧಾನಿ ನರೇಂದ್ರ ಮೋದಿ ಅವರು, ಕುಟುಂಬ ರಾಜಕಾರಣ ವಿರೋಧಿಸುತ್ತಾರೆ. ಹಾಗೇ ಕುಟುಂಬ ರಾಜಕಾರಣ ನಿರ್ಮೂಲನೆ ಮಾಡುವದಾದರೆ, ಮೊದಲು ಬಿಎಸ್ ಯಡಿಯೂರಪ್ಪ ಕುಟುಂಬದಿಂದಲೇ ಆರಂಭಿಸಲಿ ಎಂದರು. ಸಚಿವ ಸ್ಥಾನ ಪಡೆದ ಮೂವರು ಈ ಹಿಂದೆ ನನ್ನ ಬಳಿ ಬಂದು ಬಿಎಸ್ ಯಡಿಯೂರಪ್ಪ ಅವರನ್ನು ಪದಚ್ಯುತಿಗೊಳಸಬೇಕು ನನ್ನನ್ನು ಭೇಟಿಯಾಗಿ ಬೆಂಬಲ ಕೋರಿದ್ದರು. ನಾವೆಲ್ಲರೂ ಕೂಡಿ ಸಿಎಂ ಯಡಿಯೂರಪ್ಪರನ್ನ ಕೆಳಗಿಳಿಸೋಣವೆಂದರು. ಅವರ ಮಾತು ಕೇಳಿ ನನಗೆ ಆಶ್ಚರ್ಯವಾಗಿತ್ತು ಆದರೆ, ಆಗ ನಾನು ಅದಕ್ಕೆ ಸೊಪ್ಪು ಹಾಕಲಿಲ್ಲ ಎಂದು ಅವರ ಹೆಸರು ಹೇಳದೇ ವಾಗ್ದಾಳಿ ನಡೆಸಿದರು.
ಹಣದ ಆಮಿಷ ಪಡೆದು ಸಿಎಂ ಸಚಿವ ಸ್ಥಾನ ನೀಡಿದ್ದಾರೆ. ಆ ಮೂಲಕ ಸಮಸ್ತ ಲಿಂಗಾಯತ ವೀರಶೈವ ಸಮಾಜದ ಮರ್ಯಾದೆಯನ್ನತೆಗೆದಿದ್ದಾರೆ. ಸಿಎಂ ಅವರಿಗೆ ನೈತಿಕತೆ ಇದ್ದರೆ ರಾಜೀನಾಮೆ ನೀಡಿ ಹೊರಬರಲಿ. ವೀರಶೈವ ಲಿಂಗಾಯತ ಮಠಗಳಿಗೆ ಹಣ ನೀಡಿ ನನ್ನ ಕೆಳಗಿಳಿಸಿದ್ದಾರೆ. ಈ ಮೂಲಕ ಕೇಂದ್ರದ ವಿರುದ್ಧ ಬಂಡೇಳುವಂತೆ ಯಡಿಯೂರಪ್ಪ ಯೋಜನೆ ಮಾಡಿದ್ದಾರೆ ಎಂದರು.
ಇದೇ ವೇಳೆ ಸಿಎಂ ಪದಚ್ಯುತಿ ಕುರಿತು ಮತ್ತೊಮ್ಮೆ ಪುನರ್ಉಚ್ಛರಿಸಿದ ಅವರು, ಸಂಕ್ರಮಣದ ಉತ್ತರಾಯಣದ ಮೂಲಕ ಸಿಎಂ ಯಡಿಯೂರಪ್ಪ ಅಂತ್ಯ ಆರಂಭವಾಗಲಿದೆ ಎಂದು ಭವಿಷ್ಯ ನುಡಿದರು.
ನಿನ್ನೆ ಈ ಕುರಿತು ಮಾತನಾಡಿದ್ದ ಯತ್ನಾಳ್, ಬೆಂಗಳೂರಿನಲ್ಲಿ ನಮ್ಮದೇನೈತ್ರಿ ಕೆಲಸ. ನಮ್ಮ ಮೊಬೈಲ್ ಕರೆನ್ಸಿ ಖಾಲಿಯಾಗಿದೆ. ಎಲ್ಲಾ ಕರೆನ್ಸಿಯೇ ಕಟ್ ಆಗಿದೆ. ಏನ್ ಮಾಡೋದು? ಎಂದು ಯತ್ನಾಳ ಚಾಟಿ ಬೀಸಿದರು.