ವಿಜಯಪುರ (ಜನವರಿ. 13); ಸಿಎಂ ವೀರಶೈವ ಲಿಂಗಾಯಿತರ ಹೆಸರಿನಲ್ಲಿ ಕೇಂದ್ರ ನಾಯಕರಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರಿಗೆ ಮನಸ್ಲಿಲ್ಲದಿದ್ದರೂ ಸಚಿವ ಸಂಪುಟಕ್ಕೆ ಮೂರು ಜನರನ್ನು ಸೇರಿಸಿಕೊಳ್ಳಲು ಅನುಮತಿ ನೀಡಿದ್ದಾರೆ. ಹೀಗಾಗಿ ಹೈಕಮಾಂಡ್ನೆ ಬ್ಲ್ಯಾಕ್ಮೇಲ್ ಮಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೊಸ ಬಾಂಬ್ ಸಿಡಿಸಿದ್ದಾರೆ. ವಿಜಯಪುರದಲ್ಲಿ ಮಕರ ಸಂಕ್ರಮಣದ ಅಂಗವಾಗಿ ಶ್ರೀ ಸಿದ್ದೇಶ್ವರ ದೇವಸ್ಥಾನದಲ್ಲಿ ನಡೆದ ಭೋಗಿ ಕಾರ್ಯಕ್ರದಮಲ್ಲಿ ತಮ್ಮ ಪತ್ನಿ ಶೈಲಜಾ ಜೊತೆ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ಮಾತನಾಡಿರುವ ಅವರು, “ಬ್ಲ್ಯಾಕ್ ಮೇಲ್ ಮಾಡುವವರನ್ನು ಸಿಎಂ ಸಚಿವರನ್ನಾಗಿ ಮಾಡಿದ್ದಾರೆ. ಒಬ್ಬರು ಸಂಸದೀಯ ಕಾರ್ಯದರ್ಶಿಯಾಗಿದ್ದಾರೆ, ಇನ್ನಿಬ್ಬರು ಸಚಿವರಾಗುತ್ತಿದ್ದಾರೆ” ಎಂದು ಕಿಡಿಕಾರಿದ್ದಾರೆ.
ಸಚಿವರಾದವರ ಪೈಕಿ ಒಬ್ಬರು ಸಿಡಿ ಬ್ಲ್ಯಾಕ್ ಮೇಲ್ ಜೊತೆಗೆ ವಿಜಯೇಂದ್ರನಿಗೆ ಹಣ ಸಂದಾಯ ಮಾಡಿ ಸಚಿವರಾಗುತ್ತಿದ್ದಾರೆ. ಈ ಮೂರೂ ಜನ ಮೂರು ತಿಂಗಳ ಹಿಂದೆ ನನ್ನನ್ನು ಭೇಟಿ ಮಾಡಿ ನೀವಾದರೂ ಸಿಎಂ ಆಗಿ, ನಮಗಾದರೂ ಅವಕಾಶ ನೀಡಿ. ನೂರಾರು ಕೋಟಿ ರೂಪಾಯಿ ಖರ್ಚು ಮಾಡುವುದಾಗಿ ತಿಳಿಸಿದ್ದರು. ಅಂದೇ ನಾನು ಆಶ್ಚರ್ಯ ಪಟ್ಟಿದ್ದೆ. ಯಡಿಯೂರಪ್ಪ ರಕ್ತ ಸಂಬಂಧಿ, ಅವರ ಮೊಮ್ಮಗ ವಿಎಸ್ಟಿ ಎಂದು ಹೇಳುತ್ತಿದ್ದರು. ಆ ಮೂರೂ ಜನರ ಹೆಸರು ಹೇಳುವುದಿಲ್ಲ. ಮಾಧ್ಯಮದವರು ವಿಜಯೇಂದ್ರನ ಪರ ಪ್ರಶ್ನೆ ಮಾಡಬೇಡಿ. ಮೂರೂ ಜನ ಸೇರಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಅವರಲ್ಲಿ ಇಬ್ಬರಿಗೆ ಸಚಿವ ಸ್ಥಾನ, ಓರ್ವರಿಗೆ ಸಿಎಂ ಸಂಸದೀಯ ಕಾರ್ಯದರ್ಶಿ ಸ್ಥಾನ ನೀಡಲಾಗಿದೆ. ಆದರೆ, ನಾನು ಯಾರಿಗೂ ಬ್ಲ್ಯಾಕ್ ಮೇಲ್ ಮಾಡುವುದಿಲ್ಲ ಎಂದು ಯತ್ನಾಳ ಕಿಡಿ ಕಾರಿದ್ದಾರೆ.
ನಿರಾಣಿ ಹೆಸರು ಹೇಳದೆ ವಾಗ್ದಾಳಿ;
ಪಂಚಮಸಾಲಿ ಸಮುದಾಯವನ್ನು ಈ ವಿಚಾರದಲ್ಲಿ ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂದು ಬಾಗಲಕೋಟೆ ಜಿಲ್ಲೆಯ ಬೀಳಗಿ ಶಾಸಕ ಮುರುಗೇಶ ನಿರಾಣಿ ಹೆಸರು ಹೇಳದೆ ಯತ್ನಾಳ ವಾಗ್ದಾಳಿ ನಡೆಸಿದರು. ಲಿಂಗಾಯಿತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ನಾಳೆ ಕೂಡಲ ಸಂಗಮದಿಂದ ಪಾದಯಾತ್ರೆ ಆರಂಭವಾಗಲಿದೆ. ಆದರೆ, ಈ ಪಾದಯಾತ್ರೆ ಮೊಟಕುಗೊಳಿಸುವ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ತಮ್ಮ ಸ್ವಾರ್ಥಕ್ಕಾಗಿ ಸಮುದಾಯವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಹಿಂದೂ ದೇವತೆಗಳಿಗೆ ಅವಮಾನ ಮಾಡಿದವರಿಗೆ ಸಚಿವ ಸ್ಥಾನ ನೀಡುತ್ತಿದ್ದಾರೆ. ಭ್ರಹ್ಮ, ರಾಮ, ಸೀತೆಯ ಬಗ್ಗೆ ಅಸಹ್ಯ ಸಂದೇಶ ಫಾರ್ವರ್ಡ್ ಮಾಡಿದವರಿಗೆ ಸಚಿವ ಸ್ಥಾನ ನೀಡಲಾಗುತ್ತಿದೆ ಎಂದು ಯತ್ನಾಳ ಮುರುಗೇಶ ನಿರಾಣಿ ಹೆಸರು ಹೇಳದೇ ಯತ್ನಾಳ ವಾಗ್ದಾಳಿ ನಡೆಸಿದರು.
ಕಳೆದ ಎರಡು ತಿಂಗಳ ಹಿಂದೆ ಯಡಿಯೂರಪ್ಪ ರೂ. 83 ಕೋ. ಹಣವನ್ನು ವೀರಶೈವ ಲಿಂಗಾಯಿತ ಮಠಗಳಿಗೆ ನೀಡಿದ್ದಾರೆ. ಈ ಮೂಲಕ ಸ್ವಾಮೀಜಿಗಳು ತಮ್ಮ ಪರ ನಿಲ್ಲುವಂತೆ ಮಾಡಿದ್ದಾರೆ. ವೀರಶೈವ ಲಿಂಗಾಯಿತ ಸಮುದಾಯವನ್ನು ಈ ಮೂಲಕ ಸಿಎಂ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಮೊನ್ನೆ ಸಭೆಯಲ್ಲಿಯೇ ವಿಜಯೇಂದ್ರ ಹಸ್ತಕ್ಷೇಪದ ಬಗ್ಗೆ ಪ್ರಸ್ತಾಪಿಸಿದ್ದೇನೆ. ದೆಹಲಿಗೆ ವಿಜಯೇಂದ್ರನನ್ನು ಕರೆದುಕೊಂಡು ಹೋಗುವ ಬದಲು ಹಿರಿಯ ಶಾಸಕರು, ಸಚಿವರನ್ನು ಕರೆದೊಯ್ಯಬೇಕಿತ್ತು. ಮಾಜಿ ಸಿಎಂ ಗಳಾದ ದಿ. ನಿಜಲಿಂಗಪ್ಪ, ವೀರೇಂದ್ರ ಪಾಟೀಲ ಮತ್ತು ಜೆ. ಎಚ್. ಪಟೇಲ ವೀರಶೈವ ಲಿಂಗಾಯಿತ ಸಮಾಜದ ಹೆಸರು ಎತ್ತಿ ಹಿಡಿದಿದ್ದರು. ಈ ಬಗ್ಗೆ ಮೊನ್ನೆ ಶಾಸಕರೊಂದಿಗೆ ಸಭೆಯಲ್ಲಿಯೇ ಸಿಎಂ ಗೆ ಹೇಳಿದ್ದೇನೆ ಎಂದು ತಿಳಿಸಿದರು.
ಸಿಎಂ ರಾಜೀನಾಮೆ ನೀಡಲಿ;ವೀರಶೈವ ಲಿಂಗಾಯಿತ ಸುಶೀಕ್ಷಿತ ಸಮಾಜ ಈಗ ಯಡಿಯೂರಪ್ಪ ಹಿಂದೆ ಇಲ್ಲ. ತಮ್ಮ ಹಿಂದೆ ಇಡೀ ವೀರಶೈವ ಲಿಂಗಾಯಿತ ಸಮುದಾಯವಿದೆ ಎಂದು ಬ್ಲ್ಯಾಕ್ ಮೇಲ್ ಮಾಡುತ್ತಿದ್ದೀರಿ. ಇಂದು ಮಕರ ಸಂಕ್ರಮಣದಿಂದ ಯಡಿಯೂರಪ್ಪ ಅಂತ್ಯ ಆರಂಭವಾಗಲಿದೆ. ನಾನು ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ಮೊದಲು ಪಕ್ಷ ನಿಷ್ಠರು, ಸರಕಾರ ರಚನೆಗೆ ಕಾರಣರಾದವರು, ಜಾತಿವಾರು, ಜಿಲ್ಲಾವಾರು ಕೋಟಾ ಗಳಿದ್ದವು.ಆದರೆ, ಈಗ ಸಿಡಿ ಇದ್ದವರದೊಂದು ಕೋಟಾ, ಸಿಡಿ ಜೊತೆಗೆ ಹಣ ನೀಡಿದವರಿಗೊಂದು ಕೋಟಾದಂತೆ ಸಚಿವ ಸ್ಥಾನ ನೀಡಲಾಗುತ್ತಿದೆ ಎಂದು ಆರೋಪಿಸಿದ ಅವರು, ಸಿಎಂ ವಿರುದ್ಧ ಭ್ರಷ್ಟಾಚಾರದ ಆರೋಪಗಳಿ, ನ್ಯಾಯಾಲಯ ಎರಡು ಪ್ರಕರಣಗಳಲ್ಲಿ ರೂ. 25 ಸಾವಿರ ದಂಡ ವಿಧಿಸಿದೆ. ನೈತಿಕತೆ ಇದ್ದರೆ ಸಿಎಂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಸವಾಲು ಹಾಕಿದರು.