ಬೆಂಗಳೂರು (ಜನವರಿ 08): ಶೋಕಿ ಮಾಡಿಕೊಂಡು ವಿಲಾಸಿ ಜೀವನ ನಡೆಸುತ್ತಾ ಬಿಂದಾಸ್ ಆಗಿ ಲೈಫ್ ಎಂಜಾಯ್ ಮಾಡಲು ಕಳ್ಳತನ ಮಾಡೋರನ್ನು ನೋಡಿರ್ತಿರಿ. ಆದರೆ ಇಲ್ಲೊಬ್ಬ ಹೆಣ್ಣು ತನ್ನ ತಂದೆಯ ಕಿಡ್ನಿ ಚಿಕಿತ್ಸೆಗಾಗಿ ಜೀವಕ್ಕೆ ಜೀವ ಕೊಡುವ ಸ್ನೇಹಿತೆಯ ಮನೆಯಲ್ಲಿ ಒಡವೆ ಕಳ್ಳತನ ಮಾಡಿ ಸದ್ಯ ಪೊಲೀಸರ ಅತಿಥಿಯಾಗಿದ್ದಾಳೆ.
ತನ್ನ ತಂದೆಯ ಕಿಡ್ನಿ ಸಮಸ್ಯೆಗೆ ಚಿಕಿತ್ಸೆ ಕೊಡಿಸಲು ಜೀವಕ್ಕೆ ಜೀವ ಕೊಡುತ್ತಿದ್ದ ಆತ್ಮೀಯ ಗೆಳತಿ ಪವಿತ್ರ ಮನೆಯಲ್ಲಿ ಕಳ್ಳತನ ಮಾಡಿದ ತೇಜಸ್ವಿನಿ (26) ಸದ್ಯ ಪೊಲೀಸರ ಅತಿಥಿಯಾಗಿದ್ದಾಳೆ. ಬೆಂಗಳೂರು ಉತ್ತರ ತಾಲೂಕು ಕುದುರುಗೆರೆಯ ಬಡಾವಣೆಯೊಂದರಲ್ಲಿ ವಾಸಿಸುತ್ತಿದ್ದ ಆರೋಪಿ ತೇಜಸ್ವಿನಿ ಕಳೆದ ಕೆಲ ದಿನಗಳಿಂದ ತನ್ನದೇ ಸಮುದಾಯದ ಹಾಗೂ ತಮ್ಮ ಊರು ಸಕಲೇಶಪುರದ ಮೂಲದವರಾದ ಪವಿತ್ರಾಳೊಂದಿಗೆ ಆತ್ಮೀಯವಾಗಿ ಸ್ನೇಹ ಸಲುಗೆಯಿಂದ ಇರುತ್ತಿದ್ದರು.ಇವರಿಬ್ಬರ ಸ್ನೇಹ ಸಲುಗೆ ಎಷ್ಟರಮಟ್ಟಿಗೆ ಇತ್ತು ಎಂದರೆ ಇಬ್ಬರು ಪರಸ್ಪರ ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳುವಷ್ಟು, ಪವಿತ್ರಾ ತನ್ನ ಒಡವೆಗಳನ್ನು ಎಲ್ಲಿ ಇಡುತ್ತಾರೆ ಎಂಬ ಮಾಹಿತಿಯೂ ಸಹ ಗೊತ್ತಿತ್ತು. ಅಲ್ಲದೇ ಪವಿತ್ರ ಎಲ್ಲಿಗಾದರೂ ಹೋಗಬೇಕಾದರೆ ಸ್ನೇಹಿತೆಯ ಮೇಲಿನ ನಂಬಿಕೆಯಿಂದ ಆರೋಪಿ ತೇಜಸ್ವಿನಿ ಕೈಗೆ ತನ್ನ ಮನೆಯ ಬೀಗವನ್ನು ಕೊಡುತ್ತಿದ್ದರು ಎನ್ನಲಾಗಿದೆ. ಆದರೆ ನಂಬಿಕೆಗೆ ದ್ರೋಹವೆಸಗಿ ಆರೋಪಿ ತೇಜಸ್ವಿನಿ ಸುಮಾರು ಐದೂವರೆ ಲಕ್ಷ ಮೌಲ್ಯದ 120 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಳು.
ಕಳೆದ ವರ್ಷ ವರಮಹಾಲಕ್ಷ್ಮಿ ಹಬ್ಬದ ನಂತರದ ದಿನದಲ್ಲಿ ಒಡವೆಗಳನ್ನು ತೆಗೆದು ಬೀರುವಿನಲ್ಲಿ ಇಟ್ಟಿದ್ದರು. ಮತ್ತೊಮ್ಮೆ ಪವಿತ್ರ ಬೀರು ನೋಡಿದಾಗ ಒಡವೆ ಬೀರುವಿನಲ್ಲಿ ಇರಲಿಲ್ಲ. ಪವಿತ್ರ ಪತಿ ಪ್ರಸನ್ನ ಒಡವೆಯನ್ನು ಯಾವುದೋ ಕಾರಣಕ್ಕೆ ತೆಗೆದುಕೊಂಡು ಹೋಗಿ ಅಡಮಾನ ಇಟ್ಟಿರಬಹುದು ಎಂದು ಪವಿತ್ರ ಸುಮ್ಮನಿರುದ್ದರು. ಕೆಲ ದಿನಗಳ ನಂತರ ಒಡವೆ ಕಳ್ಳತನ ಆಗಿರುವುದು ಬೆಳಕಿಗೆ ಬಂದ ನಂತರ ಪವಿತ್ರ ಪತಿ ಪ್ರಸನ್ನ ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ದೂರು ದಾಖಲಿಸುತ್ತಾರೆ.