ಬೆಂಗಳೂರು,ಜ.6- ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಬ್ರಾಹ್ಮಣ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ದವಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳಿದ್ದಾರೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಎಸ್ಸೆಸ್ಸೆಲ್ಸಿಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಮತ್ತು ವಿವಿಧ ಯೋಜನೆಗಳ ಲೋಕಾರ್ಪಣೆ, ವಿಪ್ರ ಗಣ್ಯರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಅವರು ಮಾತನಾಡಿದರು.
ಶಂಕರಾಚಾರ್ಯ, ಮಧ್ವಾಚಾರ್ಯ ಸೇರಿದಂತೆ ಅನೇಕರು ಇದೇ ಸಮುದಾಯದಲ್ಲಿ ಹುಟ್ಟಿದವರು. ಶಿಕ್ಷಣ, ಆರ್ಥಿಕ, ರಾಜಕೀಯ ಕ್ಷೇತ್ರಗಳಲ್ಲಿ ಅನೇಕರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಇಂತಹ ಸಮುದಾಯದ ಅಭಿವೃದ್ಧಿಯಾಗಬೇಕೆಂಬುದು ಎಲ್ಲರ ಅಪೇಕ್ಷೆಯಾಗಿದೆ. ಬ್ರಾಹ್ಮಣ ಸಮುದಾಯದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಆರ್ಥಿಕವಾಗಿ ಹಿಂದುಳಿದವರಿಗೆ ನೆರವು ಸೇರಿದಂತೆ 10 ಹಲವು ಕಾರ್ಯಕ್ರಮಗಳನ್ನು ಕೈಗೊಂಡಿದ್ದೇವೆ.
ಮುಂದಿನ ದಿನಗಳಲ್ಲಿ ಸಮುದಾಯದ ಅಭಿವೃದ್ದಿಗೆ ಬದ್ದವಾಗಿದ್ದೇನೆ. ಬ್ರಾಹ್ಮಣ ಅಭಿವೃದ್ದಿ ಮಂಡಳಿ ವತಿಯಿಂದ ತುರ್ತಾಗಿ ಆಗಬೇಕಾದ ಕಾರ್ಯಗಳ ಬಗ್ಗೆ ಅಧ್ಯಕ್ಷರು ಗಮನವಹಿಸಬೇಕು ಎಂದರು. ಡಿಸಿಎಂ ಗೋವಿಂದ ಕಾರಜೋಳ ಮಾತನಾಡಿ, ಬ್ರಾಹ್ಮಣ ಸಮುದಾಯ ಸಂಸ್ಕøತಿ ಮತ್ತು ಅಕ್ಷರ ಅಭ್ಯಾಸ ಕ್ರಾಂತಿಯನ್ನು ಮಾಡಿದ ಶಂಕರ ಚಾರ್ಯರು, ಮಧ್ವಾಚಾರ್ಯರು, ಯು.ಎನ್.ರ್ ರಾವ್, ಸರ್ಎಂ.ವಿಶ್ವೇಶ್ವರಯ್ಯ, ಯು.ಆರ್.ಅನಂತಮೂರ್ತಿ, ಇನ್ಫೋಸಿಸ್ನ ನಾರಾಯಣಮೂರ್ತಿ, ಸುಧಾಮೂರ್ತಿ ಸೇರಿದಂತೆ ಅನೇಕರು ಇದೇ ಸಮುದಾಯದಿಂದ ಬಂದವರು ಸ್ಮರಿಸಿದರು.
ವಿಶ್ವ ಮಾನವ ಸಂದೇಶ ಸಾರಿದ ಬಸವಣ್ಣನವರು ಕೂಡ ಬ್ರಾಹ್ಮಣರೇ. ಕರ್ನಾಟಕದ ಸಂಸ್ಕøತಿ, ಆಚಾರವಿಚಾರಗಳು ಇಂದು ಎಲ್ಲೆಡೆ ಪಸರಿಸಿದೆ. ಅದಕ್ಕೆ ಬ್ರಾಹ್ಮಣ ಸಮುದಾಯದ ಕೊಡುಗೆ ಅಪಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ತಾವು ವಿದ್ಯೆಯನ್ನು ಕಲಿತು ಬೇರೆಯವರಿಗೆ ಅಕ್ಷರ ಜ್ಞಾನ ಬೆಳೆಸುವ ಅಪರೂಪದ ಸಮುದಾಯವೆಂದರೆ ಬ್ರಾಹ್ಮಣ ಸಮುದಾಯ ಮಾತ್ರ. ನೀವು ಆರ್ಥಿಕವಾಗಿ ಹಿಂದುಳಿದಿರಬಹುದು. ಆದರೆ ನಿಮ್ಮ ಹೃದಯ ಶ್ರೀಮಂತಿಕೆ ಮಾತ್ರ ಯಾರಿಗೂ ಕಡಿಮೆಯಿಲ್ಲ. ಶಿಕ್ಷಣ, ಸಂಸ್ಕøತಿ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಕರ್ನಾಟಕ ಇಂದು ಮುಂಚೂಣಿಯಲ್ಲಿದೆ ಎಂದರು.
ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ನಾವು ಬ್ರಾಹ್ಮಣರು ಹುಟ್ಟುತ್ತಲೇ ಗಳಿಸುವುದಿಲ್ಲ. ನಾವು ಕೂಡ ಪರಿಶ್ರಮ ವಹಿಸಿ ಮೇಲಕ್ಕೆ ಬಂದಿದ್ದೇವೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ನಾವು ಸಾಧನೆ ಮಾಡಿದ್ದೇವೆ ಎಂದರೆ ಅದಕ್ಕೆ ಬ್ರಾಹ್ಮಣ ಸಮುದಾಯವೇ ಕಾರಣ ಎಂದರು.