ಬೆಂಗಳೂರು(ಜ.06): ಸರ್ಕಾರ ತಪ್ಪು ಮಾಡಿದಾಗ ಎಚ್ಚರಿಸಿದ್ದೇನೆ. ಅಭಿವೃದ್ದಿ ಬಗ್ಗೆ ಮಾತನಾಡಿದರೆ ಅದು ಪಕ್ಷ ವಿರೋಧಿ ಹೇಳಿಕೆ ಹೇಗಾಗುತ್ತೆ? ನಾನೇನು ಮಂತ್ರಿ ಮಾಡಿ ಅಂತ ಯಡಿಯೂರಪ್ಪನವರ ಮನೆಗೆ ಹೋಗಿಲ್ಲ. ಮೂವತ್ತು ವರ್ಷ ನಾನು ರಾಜಕೀಯ ಮಾಡಿದವನು. ಯಾರಿಗೂ ಹೆದರೋ ಮಗ ನಾನಲ್ಲ ಎಂದು ವಿಜಯಪುರ ನಗರ ಶಾಸಕ ಬಸನಗೌಡ ರಾ. ಪಾಟೀಲ ಯತ್ನಾಳ ಗುಡುಗಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ವಪಕ್ಷೀಯರ ವಿರುದ್ಧ ತಿರುಗಿ ಬಿದ್ದರು. ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ವಿರುದ್ಧವೂ ಕಿಡಿಕಾರಿದರು. ಗೋವಿಂದ ಕಾರಜೋಳ ಹೇಳಿದ್ದು ನಿಜ. ಸಭೆಯಲ್ಲಿ ಒಬ್ಬ ಶಾಸಕ ಮಾತ್ರ ಮಾತಾಡಿದ್ದು ನಿಜ. ಆ ಶಾಸಕ ಯಾರೆಂದರೆ ಹಾದಿ-ಬೀದಿಯಲ್ಲಿ ನಿಮಗೆ ಬೈಟ್ ಕೊಡ್ತಾರಲ್ಲ ಅವರು ಎಂದು ರೇಣುಕಾಚಾರ್ಯರ ಹೆಸರೇಳದೆ ಯತ್ನಾಳ್ ವಾಗ್ದಾಳಿ ನಡೆಸಿದರು.