: ಕೋಲ್ಕತ: ಕರ್ನಾಟಕದ ಖ್ಯಾತ ಹೃದಯ ಶಸ್ತ್ರಚಿಕಿತ್ಸೆ ತಜ್ಞ ಡಾ. ದೇವಿ ಶೆಟ್ಟಿ ಅವರು ಬಿಸಿಸಿಐ ಅಧ್ಯಕ್ಷ ಹಾಗೂ ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ತಂಡವನ್ನು ಸೋಮವಾರ ಕೂಡಿಕೊಂಡಿದ್ದಾರೆ. ಲಘು ಹೃದಯಾಘಾತದ ಬಳಿಕ ಈಗಾಗಲೆ ಆಯಂಜಿಯೋಪ್ಲಾಸ್ಟಿಗೆ ಒಳಗಾಗಿರುವ 48 ವರ್ಷದ ಗಂಗೂಲಿ ಅವರಿಗೆ ನೀಡಬೇಕಾಗಿರುವ ಮುಂದಿನ ಚಿಕಿತ್ಸೆಯ ಬಗ್ಗೆ ಅವರು ವೈದ್ಯರ ತಂಡದೊಂದಿಗೆ ಚರ್ಚಿಸಿದ್ದಾರೆ.
ಗಂಗೂಲಿ ಅವರ ಹೃದಯ ಚಿಕಿತ್ಸೆಗಾಗಿ ಒಟ್ಟು 9 ವೈದ್ಯರ ತಂಡವನ್ನು ರಚಿಸಲಾಗಿದೆ. ಕೋಲ್ಕತದ ವುಡ್ಲ್ಯಾಂಡ್ಸ್ ಆಸ್ಪತ್ರೆಯಲ್ಲಿ ಗಂಗೂಲಿಗೆ ಚಿಕಿತ್ಸೆ ನೀಡುತ್ತಿರುವ ತಂಡದೊಂದಿಗೆ ಕನ್ನಡಿಗ ಡಾ. ದೇವಿ ಶೆಟ್ಟಿ ಜತೆಗೆ ಮತ್ತೋರ್ವ ಹೃದಯ ತಜ್ಞ ಡಾ. ಆರ್ಕೆ ಪಾಂಡ ಕೂಡ ವರ್ಚುವಲ್ ಮೂಲಕ ಪಾಲ್ಗೊಂಡಿದ್ದಾರೆ.
ಗಂಗೂಲಿಗೆ ಈಗಲೆ ಮತ್ತೊಮ್ಮೆ ಆಯಂಜಿಯೋಪ್ಲಾಸ್ಟಿ ಚಿಕಿತ್ಸೆ ನೀಡುವ ಅಗತ್ಯವಿಲ್ಲ. ಸದ್ಯಕ್ಕೆ ಅವರ ಆರೋಗ್ಯ ಸ್ಥಿರವಾಗಿದ್ದು, ಬೇಕಿದ್ದರೆ ಮುಂದಿನ ದಿನಗಳಲ್ಲಿ ಮತ್ತೆ ಈ ಚಿಕಿತ್ಸೆ ನೀಡಬಹುದು. ಗಂಗೂಲಿ ಈಗ ಯಾವುದೇ ರೀತಿಯ ಎದೆ ನೋವು ಹೊಂದಿಲ್ಲ ಎಂದು ವೈದ್ಯರ ತಂಡ ಒಮ್ಮತದ ಅಭಿಪ್ರಾಯ ಕೈಗೊಂಡಿದೆ ಎಂದು ಆಸ್ಪತ್ರೆಯ ಎಂಡಿ ಹಾಗೂ ಸಿಇಒ ಡಾ. ರೂಪಾಲಿ ಬಸು ತಿಳಿಸಿದ್ದಾರೆ.
ವೈದ್ಯರ ತಂಡದ ಸಭೆಯಲ್ಲಿ ಗಂಗೂಲಿ ಕುಟುಂಬದ ಸದಸ್ಯರೂ ಪಾಲ್ಗೊಂಡಿದ್ದರು ಮತ್ತು ಅವರಿಗೆ ಮುಂದಿನ ಚಿಕಿತ್ಸಾ ಯೋಜನೆಯ ಬಗ್ಗೆ ವಿವರಿಸಲಾಗಿದೆ. ಗಂಗೂಲಿ ಮನೆಗೆ ಮರಳಿದ ಬಳಿಕವೂ ವೈದ್ಯರ ತಂಡ ಆರೋಗ್ಯದ ಮೇಲೆ ಕಣ್ಣಿಡಲಿದೆ ಎಂದು ರೂಪಾಲಿ ತಿಳಿಸಿದ್ದಾರೆ.
ಗಂಗೂಲಿ ಹೃದಯದ ರಕ್ತನಾಳಗಳಲ್ಲಿದ್ದ 3 ಬ್ಲಾಕ್ಗಳನ್ನು ಈಗಾಗಲೆ ತೆರವುಗೊಳಿಸಲಾಗಿದ್ದು, ಒಂದು ಸ್ಟೆಂಟ್ ಕೂಡ ಅಳವಡಿಸಲಾಗಿದೆ. ಈ ನಡುವೆ ಅವರ ಕರೊನಾ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿತ್ತು.