ಬೆಳಗಾವಿ: ಅದು ಕರ್ನಾಟಕದ ಕಟ್ಟ ಕಡೆಯ ಹಳ್ಳಿ. ಅತೀ ಹೆಚ್ಚು ಸೈನಿಕರನ್ನು ಭಾರತೀಯ ಸೇನೆಗೆ ಕೊಟ್ಟ ಹೆಗ್ಗಳಿಕೆ ಈ ಊರಿಗೆ ಸಲ್ಲುತ್ತದೆ. ಅಲ್ಲಿನ ಮಕ್ಕಳು ಎ ಫಾರ್ ಏನು ಅಂತಾ ಕೇಳಿದ್ರೆ ಆಪಲ್ ಅನ್ನೋದಿಲ್ಲ, ಬದಲಾಗಿ ಎ ಫಾರ್ ಆರ್ಮಿ ಅಂತಾರೆ. ದೇಶಭಕ್ತಿ ಇಲ್ಲಿನ ಮನೆ ಮನಗಳಲ್ಲೂ ಮೇಳೈಸಿದ್ದು, ಏಕಕಾಲಕ್ಕೆ ಈ ಗ್ರಾಮದ 9 ಯುವಕ-ಯುವತಿಯರು ಸೇನೆಗೆ ಆಯ್ಕೆಯಾಗುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
ಧಾರವಾಡದಲ್ಲಿ ಯಾರ ಮನೆ ಮೇಲೆ ಕಲ್ಲು ಎಸೆದರೂ ಕವಿಗಳು-ಸಾಹಿತಿಗಳು ಸಿಗುತ್ತಾರೆ ಎಂಬ ಮಾತು ಹೇಗೆ ಜನಜನಿತವಾಗಿದೆಯೋ, ಅದೇ ರೀತಿ ಈ ಊರಿನ ಪ್ರತಿ ಮನೆಯಲ್ಲೂ ಯೋಧ ಸಿಗುತ್ತಾರೆ. ಅಂತ ಅಪರೂಪದ ಊರು ಬೆಳಗಾವಿ ತಾಲೂಕಿನ ಕುದ್ರೇಮನಿ. ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿರುವ ಇದು ಮರಾಠಿ ಭಾಷಿಕರು ಹೆಚ್ಚಿರುವ ಊರಾದರೂ ಕರುನಾಡಿಗೆ ಸೇರಿದ ಕೊನೆಯ ಹಳ್ಳಿಯಾಗಿದೆ.
ಬೆಳಗಾವಿಯಿಂದ 20 ಕಿಲೋ ಮೀಟರ್ ಅಂತರದಲ್ಲಿರುವ ಕುದ್ರೇಮನಿಯಲ್ಲಿ 1,200 ಮನೆಗಳಿದ್ದು, 7 ಸಾವಿರ ಜನಸಂಖ್ಯೆ ಇದೆ. ಪೂರ್ಣ ಪ್ರಮಾಣದಲ್ಲಿ ಮರಾಠಿ ಭಾಷಿಕರೇ ಇಲ್ಲಿದ್ದು, ಕೃಷಿಯೇ ಗ್ರಾಮಸ್ಥರ ಮೂಲಾಧಾರವಾಗಿದೆ. ಗ್ರಾಮಸ್ಥರು ಹೇಳುವ ಪ್ರಕಾರ ಇಲ್ಲಿನ ಪ್ರತಿ ಓಣಿಯಲ್ಲೂ 7ಕ್ಕೂ ಅಧಿಕ ಸೈನಿಕರಿದ್ದು, ಸದ್ಯ 350ಕ್ಕೂ ಅಧಿಕ ಯೋಧರು ಗಡಿ ಕಾಯುತ್ತಿದ್ದಾರೆ. ಇನ್ನು, 50 ಸೈನಿಕರು ನಿವೃತ್ತಿ ಹೊಂದಿದ್ದು, ಈಗ ಮತ್ತೆ 9 ಮಂದಿ ಬಿಎಸ್ಎಫ್, ಸಿಆರ್ಪಿಎಫ್ಗೆ ಆಯ್ಕೆ ಆಗಿದ್ದಾರೆ. ಅದರಲ್ಲಿ 7 ಯುವಕರು, ಇಬ್ಬರು ಯುವತಿಯರು ಇರುವುದು ವಿಶೇಷ.
Laxmi News 24×7