ಶಿವಮೊಗ್ಗ, : ರಂಗಭೂಮಿಯ ವೃತ್ತಿಪರತೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಶಿವಮೊಗ್ಗ ರಂಗಾಯಣ ಕಳೆದ 10 ವರ್ಷಗಳಲ್ಲಿ ದೃಢವಾದ ಹೆಜ್ಜೆಯನ್ನು ಇರಿಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದರು. ಶನಿವಾರ ಶಿವಮೊಗ್ಗ ರಂಗಾಯಣದ ನೂತನ ವೆಬ್ಸೈಟ್ ಅನಾವರಣಗೊಳಿಸಿ ಅವರು ಮಾತನಾಡಿದರು.
ಶಿವಮೊಗ್ಗ ರಂಗಾಯಣ ನಿರಂತರ ರಂಗ ಚಟುವಟಿಕೆಗಳ ಮೂಲಕ ರಂಗಾಸಕ್ತರನ್ನು ಸೆಳೆಯುತ್ತಿದೆ. ರಂಗಸಂಕ್ರಾಂತಿ ರಾಷ್ಟ್ರೀಯ ನಾಟಕೋತ್ಸವ, ವಿಶ್ವಮಾನವ ಅಂತಾರಾಷ್ಟ್ರೀಯ ರಂಗೋತ್ಸವ, ವಿಶ್ವರಂಗಭೂಮಿ ದಿನಾಚರಣೆ, ರೆಪರ್ಟರಿಯ ಹಲವಾರು ನಾಟಕಗಳನ್ನು ರಂಗತೇರು ಹೆಸರಿನಲ್ಲಿ ರಾಜ್ಯದಾದ್ಯಂತ ಪ್ರದರ್ಶನ ನಡೆಸಿದೆ. ಕೋವಿಡ್ ಹಿನ್ನೆಲೆಯಲ್ಲಿ ರಂಗ ಚಟುವಟಿಕೆಗಳಿಗೆ ಹಿನ್ನಡೆ ಉಂಟಾದರೂ ಆನ್ಲೈನ್ ಕಾರ್ಯಕ್ರಮಗಳ ಮೂಲಕ ರಂಗಚಟುವಟಿಕೆಗಳನ್ನು ಜೀವಂತವಾಗಿರಿಸಿರುವುದು ಪ್ರಶಂಸನೀಯ ಎಂದರು.ರಂಗ ದಿಗ್ಗಜ ಬಿ.ವಿ.ಕಾರಂತರ ಕನಸಿನ ಕೂಸಾದ ರಂಗಾಯಣ ಮೈಸೂರಿನಿಂದ ಪ್ರಾರಂಭವಾಗಿ ಇಂದು ರಾಜ್ಯದ 4 ಭಾಗಗಳಲ್ಲಿ ತನ್ನ ಶಾಖೆಯನ್ನು ವಿಸ್ತರಿಸಿಕೊಂಡಿದೆ. ಶಿವಮೊಗ್ಗದಲ್ಲಿ ರಂಗಾಯಣಕ್ಕೆ ಸುಸಜ್ಜಿತವಾದ ಸುವರ್ಣ ಸಾಂಸ್ಕೃತಿಕ ಭವನವನ್ನು ಒದಗಿಸಲಾಗಿದ್ದು, ರಂಗ ಚಟುವಟಿಕೆಗಳಿಗೆ ಎಲ್ಲಾ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.