ಧಾರವಾಡ (ಜನವರಿ 1); ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ತರಗತಿಗಳ ಪ್ರಾರಂಭೋತ್ಸವ ಹಾಗೂ 6 ರಿಂದ 9 ನೇಯ ತರಗತಿ ಮಕ್ಕಳಿಗೆ ವಿದ್ಯಾಗಮ 2 ರ ಪ್ರಾರಂಭಕ್ಕೆ ಧಾರವಾಡ ಜಿಲ್ಲೆಯಾದ್ಯಂತ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲಾ ,ಕಾಲೇಜುಗಳಲ್ಲಿ ಸಿದ್ಧತೆಗಳು ಪೂರ್ಣಗೊಂಡಿವೆ. ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸುಶೀಲಾ ಅವರು ಶಹರ ಹಾಗೂ ಗ್ರಾಮೀಣ ಪ್ರದೇಶದ ಅನೇಕ ಶಾಲೆ,ಕಾಲೇಜುಗಳಿಗೆ ಭೇಟಿ ನೀಡಿ ಕೋವಿಡ್ 19 ರ ತಡೆಗೆ ಸರ್ಕಾರದ ಸುರಕ್ಷತಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅಳವಡಿಸಿರುವುದನ್ನು ಪರಿಶೀಲಿಸಿದ್ದಾರೆ.ಕರಡಿಗುಡ್ಡ, ಲಕಮಾಪುರ, ಯಾದವಾಡ, ಧಾರವಾಡದ ಆರ್.ಎನ್. ಕ್ರೀಡಾಂಗಣದ ಬಳಿಯ ಸರ್ಕಾರಿ ಪ್ರೌಢಶಾಲೆ , ಕೆ.ಇ.ಬೋರ್ಡ್ ಪ್ರೌಢಶಾಲೆ, ಪದವಿಪೂರ್ವ ಕಾಲೇಜು ಸೇರಿದಂತೆ ಅನೇಕ ವಿದ್ಯಾಸಂಸ್ಥೆಗಳಿಗೆ ಭೇಟಿ ನೀಡಿ ಪುನರಾರಂಭಕ್ಕೆ ಕೈಗೊಂಡಿರುವ ಸಿದ್ಧತೆಗಳನ್ನು ಖುದ್ದಾಗಿ ಪರಿಶೀಲಿಸಿದರು. ಪ್ರತಿಯೊಂದು ಶಾಲೆಯಲ್ಲಿ ದೈಹಿಕ ಅಂತರ ಕಾಪಾಡಿಕೊಂಡು ಸರದಿ ಸಾಲಿನಲ್ಲಿ ಬರಲು ಚೌಕಾಕಾರದ ಗುರುತುಗಳು, ಕೊಠಡಿಗಳ ಸ್ಯಾನಿಟೈಸೇಷನ್, ಐಸೋಲೇಷನ್ ರೂಮ್, ಶೌಚಾಲಯ ಮತ್ತಿತರ ವ್ಯವಸ್ಥೆಗಳನ್ನು ಕೂಲಂಕಷವಾಗಿ ವೀಕ್ಷಿಸಿದರು.
ಎಲ್ಲಾ ಪಾಲಕರ ಸಭೆ ನಡೆಸಿ ಅವರಿಂದ ಒಪ್ಪಿಗೆ ಪತ್ರ ಪಡೆಯಬೇಕು. ಮಕ್ಕಳು ಒಟ್ಟುಗೂಡಿ ಸಂದಣಿ ಉಂಟು ಮಾಡಬಾರದು. ಪ್ರಾರ್ಥನೆ, ಊಟ,ಉಪಹಾರಕ್ಕೆ ಅವಕಾಶ ಬೇಡ. ಆಹಾರ ಧಾನ್ಯ ಮಕ್ಕಳಿಗೆ ಮನೆಗೆ ಕಳುಹಿಸಿಕೊಡಬೇಕು. ಮನೆಯಿಂದ ತಂದ ಬಿಸಿ ನೀರು ಕುಡಿಯಲು ಹೇಳಬೇಕು. ಮಕ್ಕಳಲ್ಲಿ ಕೋವಿಡ್ ಭೀತಿ ಉಂಟಾಗದಂತೆ ಭರವಸೆ ತುಂಬಬೇಕು. ಪರೀಕ್ಷಾ ಭಯ ಬೇಡ, ಇರುವ ಅವಧಿಯಲ್ಲಿ ಮಕ್ಕಳನ್ನು ಪರೀಕ್ಷೆಗೆ ಅಣಿಗೊಳಿಸೋಣ ಎಂದು ಜಿಪಂ ಸಿಇಓ ಡಾ.ಬಿ.ಸುಶೀಲಾ ಅವರು ಶಿಕ್ಷಕರಿಗೆ ಸಲಹೆ ನೀಡಿದರು.