ಗಂಗಾವತಿ: ಪ್ರವಾಸಕ್ಕೆಂದು ಬಂದು ಇಲ್ಲಿನ ಪ್ರಕೃತಿಗೆ ಮಾರುಹೋಗಿ ಕಳೆದ ಹಲವು ದಶಕದಿಂದ ಇಲ್ಲೇ ಒಂಟಿಯಾಗಿ ಬದುಕು ನಡೆಸುತ್ತಿದ್ದ ಬೆಲ್ಜಿಯಂ ದೇಶದ ಮಹಿಳೆ ಚಿಯಾರೆಲ್ ಮೈಕೆಲ್ ಆಂಟೋನಿಯಾ(70) ಅಲಿಯಾಸ್ ಮೀರಮ್ಮ ಅವರು ಬುಧವಾರ ತಡರಾತ್ರಿ ನಿಧನರಾದರು.
ಹನುಮನಹಳ್ಳಿ ಸಮೀಪ ಇರುವ ತನ್ನ ಆಧ್ಯಾತ್ಮಗುರು ಸುಬ್ರಹ್ಮಣ್ಯ ಅವರ ಸಮಾಧಿ ಪಕ್ಕದಲ್ಲಿಯೇ ಇಂದು (ಗುರುವಾರ) ಸ್ಥಳೀಯರು ಆಂಟೋನಿಯಾ ಅವರ ಇಚ್ಛೆಯಂತೆ ಸನಾತನ ಹಿಂದೂ ಪರಂಪರೆಯ ಪ್ರಕಾರ ಅಂತ್ಯಸಂಸ್ಕಾರ ನೆರವೇರಿಸಿದರು.
ಮಹಿಳೆ ಬೆಲ್ಜಿಯಂ ದೇಶಕ್ಕೆ ಸೇರಿದ್ದರಿಂದ ಆಕೆಯ ಅಂತ್ಯಸಂಸ್ಕಾರಕ್ಕೆ ಕುಟುಂಬಿಕರ ಸಮ್ಮತಿ ಬೇಕಿತ್ತು. ಆಂಟೋನಿಯಾ ಸಹೋದರಿಯ ಮಕ್ಕಳು ಸ್ವಿಟ್ಜರ್ಲೆಂಡ್ನಲ್ಲಿ ವಾಸ ಮಾಡುತ್ತಿದ್ದಾರೆ. ಇವರ ನಿಧನ ವಾರ್ತೆಯನ್ನು ಅವರ ಗಮನಕ್ಕೆ ತರಲಾಗಿತ್ತು. ಇದಕ್ಕೆ ದೆಹಲಿಯ ರಾಯಭಾರ ಕಚೇರಿಯಿಂದ ಕೊಪ್ಪಳದ ಜಿಲ್ಲಾಧಿಕಾರಿ ಕಚೇರಿಗೆ ಅಧಿಕೃತವಾಗಿ ಪತ್ರ ರವಾನಿಸಿ ಸಮ್ಮತಿ ಸೂಚಿಸಿದ್ದರು. ಆ ಬಳಿಕ ಆರೋಗ್ಯ, ಪೊಲೀಸ್ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿಸಿ, ಫೋಟೋಗಳನ್ನು ಕುಟುಂಬಸ್ಥರಿಗೆ ಕಳುಹಿಸಲಾಗಿದೆ.
Laxmi News 24×7