ಬೆಂಗಳೂರು: ಕಳ್ಳತನವನ್ನೇ ಕಾಯಕ ಮಾಡಿಕೊಂಡು ಹಾಡಹಾಗಲೇ ಮನೆಗಳ್ಳತನ ಮಾಡುತ್ತಿದ್ದ ಕುಖ್ಯಾತ ಖದೀಮನೋರ್ವ ಇಲ್ಲಿನ ವಿದ್ಯಾರಣ್ಯಪುರ ಪೊಲೀಸರ ಬಲೆಗೆ ಬಿದ್ದಿದ್ಧಾನೆ.
ಮೈಸೂರು ಮೂಲದ ಸಯ್ಯದ್ ಅಸ್ಲಾಂ ಪಾಷ (40) ಪೊಲೀಸರ ಬಲೆಗೆ ಬಿದ್ದವ. ಬಂಧಿತನಿಂದ 22 ಲಕ್ಷ ರೂ ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ವಸ್ತುಗಳನ್ನು ವಶಕ್ಕೆ ಪಡೆದುಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮನೆಗಳ್ಳತನ ಮಾಡುವುದನ್ನು ಸಿದ್ದಿಸಿಕೊಂಡಿದ್ದ ಖದೀಮ ಹಾಡಹಾಗಲೇ ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಐಷಾರಾಮಿ ಮನೆಗಳನ್ನು ಗುರುತಿಸಿ ರಾತ್ರಿ ವೇಳೆ ತೆರಳಿ ಮನೆಗಳ್ಳತನ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ಧಾರೆ.
150ಕ್ಕೂ ಹೆಚ್ಚು ಪ್ರಕರಣಗಳು: ಬೆಂಗಳೂರು, ಶಿವಮೊಗ್ಗ, ಮೈಸೂರು, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಆರೋಪಿ ಮೋಸ್ಟ್ ವಾಂಟೆಡ್ ಖದೀಮನಾಗಿದ್ದ. ಈತನ ವಿರುದ್ಧ 150ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಈ ಪೈಕಿ 64 ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆ ಹಂತದಲ್ಲಿವೆ ಎಂದು ಪೊಲೀಸರು ಮಾಹಿತಿ ನೀಡಿದ್ಧಾರೆ.
20 ವರ್ಷಗಳಿಂದ ಕಳ್ಳತನ: ಐಷಾರಾಮಿ ಜೀವನ ಮತ್ತು ಮೋಜು ಮಸ್ತಿ ಮಾಡಲು ಆರೋಪಿ ಕಳ್ಳತನ ಕೃತ್ಯಕ್ಕೆ ಕೈಹಾಕುತ್ತಿದ್ದ. ಕದ್ದ ಹಣ ಖಾಲಿಯಾದ ನಂತರ ಮುಂದಿನ ಕಳ್ಳತನಕ್ಕೆ ಸಿದ್ಧನಾಗುತ್ತಿದ್ದ. ಒಂದು ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದರೆ ಆ ಪ್ರಕರಣ ಹಳೆಯದಾಗುವವರೆಗೂ ಅಂದರೆ ಕನಿಷ್ಠ ಒಂದು ವರ್ಷವಾದರೂ ಮತ್ತೆ ಆ ಪ್ರದೇಶಕ್ಕೆ ಕಾಲಿಡದೆ ಎಚ್ಚರಿಕೆ ವಹಿಸುತ್ತಿದ್ದ. ಕಳೆದ 20 ವರ್ಷಗಳಿಂದ ಕಳ್ಳತನವನ್ನೇ ತನ್ನ ಫುಲ್ ಟೈಮ್ ಜಾಬ್ ಮಾಡಿಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಕಳ್ಳತನದಿಂದ ಬಂದ ಹಣದಿಂದ ಗೋವಾಗೆ ತೆರಳಿ ಮೋಜು ಮಸ್ತಿ ಸಹ ಮಾಡುತ್ತಿದ್ದ. ಅಲ್ಲಿಂದ ಮನೆಗೆ ಬಂದು ಕುಟುಂಬ ಸದಸ್ಯರಿಗೆ ಹಣ ನೀಡುತ್ತಾ, ಜೈಲಿನಿಂದ ಬಿಡಿಸಲು ಮಾಡಿದ್ದ ಸಾಲವನ್ನೂ ತೀರಿಸುತ್ತಿದ್ದ ಎಂದು ಮೂಲಗಳು ತಿಳಿಸಿವೆ.
ಪ್ರಕರಣ ಸಂಬಂಧ ಮಾಹಿತಿ ನೀಡಿದ ಈಶಾನ್ಯ ವಿಭಾಗದ ಡಿಸಿಪಿ ಸಜೀತ್, “ಕಳೆದ 15-20 ದಿನಗಳ ಹಿಂದೆ ಇಲ್ಲಿನ ವಿದ್ಯಾರಣ್ಯಪುರ ಠಾಣೆ ಸೇರಿದಂತೆ ವಿವಿಧ ಕಡೆಗಳಲ್ಲಿ ದಾಖಲಾಗಿದ್ದ ಆರು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯನ್ನ ಬಂಧಿಸುವಲ್ಲಿ ನಮ್ಮ ಪೊಲೀಸ್ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಈತನ ಪೂರ್ವಾಪರ ಹಿನ್ನೆಲೆಯನ್ನು ವಿಚಾರಣೆ ಮಾಡಿದಾಗ ಆರೋಪಿಯು ರೂಢಿಗತ ಖದೀಮನಾಗಿದ್ದ ಎಂಬುವುದು ಗೊತ್ತಾಗಿದೆ. ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ.
Laxmi News 24×7