ಚಿಕ್ಕೋಡಿ ): ಬಿಜೆಪಿ ದೇಶದಲ್ಲಿ ಸುಳ್ಳಿನ ರಾಜಕೀಯ ಮಾಡುತ್ತಲೇ ದೇಶದ ಜನರ ದಾರಿ ತಪ್ಪಿಸುತ್ತಿದೆ. ಬಡವರನ್ನ ಉದ್ದಾರ ಮಾಡುತ್ತೇವೆ ಎಂದು ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ದೇಶದ ಬಡವರನ್ನ ಮತ್ತಷ್ಟು ಬಡವರನ್ನಾಗಿಸುತ್ತಿದೆ. ಇದೆ ಬಿಜೆಪಿಯವರ ಅಜೆಂಡಾ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಬಿಜೆಪಿ ವಿರುದ್ದ ಹರಿಹಾಯ್ದಿದ್ದಾರೆ. ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರುತ್ತೇವೆ ಎಂದು ಹೇಳುತ್ತಿರುವ ಬಿಜೆಪಿಯವರೆ ಅತಿ ಹೆಚ್ಚು ಗೋ ಮಾಂಸವನ್ನು ವಿದೇಶಗಳಿಗೆ ರಪ್ತು ಮಾಡುತ್ತಿದ್ದಾರೆ. ಬಿಜೆಪಿಯ ರಾಜಕೀಯ ಲಾಭಕ್ಕಾಗಿ ಈಗ ಗೋಹತ್ಯೆ ನಿಷೇಧದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ಇದಕ್ಕೂ ಮೊದಲೇ ಕಾಂಗ್ರೆಸ್ ಸರ್ಕಾರ ಈ ಕಾಯಿದೆ ಜಾರಿಗೆ ತಂದಿದೆ ಎಂದಿದ್ದಾರೆ. ಬಿಜೆಪಿಯವರು ನೆಹರು ಬಗ್ಗೆ ಟೀಕೆ ಮಾಡುತ್ತಾರೆ. ಆದರೆ, ದೇಶ ಇಷ್ಟು ಪ್ರಗತಿ ಹೊಂದಲು ನೆಹರು ಅವರೇ ಪ್ರಮುಖ ಕಾರಣ ಎನ್ನುವುದನ್ನ ಮರೆತಿದ್ದಾರೆ ಎಂದರು.
ಅವರ ಪರಿಕಲ್ಪನೆ ಪರಿಣಾಮ ದೇಶದಲ್ಲಿ ಖಾಸಗಿ ಸಂಸ್ಥೆಗಳು, ನೀರಾವರಿ ಯೋಜನೆಗಳು, ಡ್ಯಾಂ ನಿರ್ಮಾಣ, ಮೆಡಿಕಲ್ ಕಾಲೇಜುಗಳು, ವಿಮಾನ ನಿಲ್ದಾಣಗಳು ಇವೆಲ್ಲವೂ ನೆಹರು ಅವರ ಪರಿಕಲ್ಪನೆಯ ಕೊಡುಗೆ ಆಗಿದೆ. ಇಷ್ಟೆಲ್ಲಾ ಮಾತನಾಡುವ ಬಿಜೆಪಿಯವರು ಒಂದೇ ಒಂದು ಡ್ಯಾಂ ಕಟ್ಟಿದ್ದಾರಾ ಎಂದು ಪ್ರಶ್ನೆ ಮಾಡಿದ್ದಾರೆ.ಬಿಜೆಪಿಯವರು ಏನಿದ್ದರೂ ಸರ್ಜಿಕಲ್ ಸ್ಟ್ರೈಕ್, ಗೋಹತ್ಯೆ, ಲವ್ ಜಿಹಾದ್ ಎನ್ನುತ್ತ ಕಾಲಹರಣ ಮಾಡುವುದೆ ಬಿಜೆಪಿಯವರ ಸಾಧನೆ ಎಂದಿದ್ದಾರೆ. ದೇಶಭಕ್ತಿ ಪ್ರತಿಯೊಬ್ಬರಿಗೂ ಹುಟ್ಟಿನಿಂದಲೆ ಬಂದಿರುತ್ತದೆ ಅದನ್ನು ಯಾರಿಂದಲೂ ಕಲಿಯಬೇಕಿಲ್ಲ. ದೇಶಭಕ್ತಿ ಹೆಸರಿನಲ್ಲಿ ಬಿಜೆಪಿಯವರು ಜನರನ್ನ ಇಬ್ಬಾಗ ಮಾಡಿ ಸುಳ್ಳು ಇತಿಹಾಸ ತಿರುಚಿ ಜನರನ್ನ ಮರಳು ಮಾಡುತ್ತಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷ 70 ವರ್ಷಗಳ ಕಾಲ ನಿರಂತರ ಶ್ರಮ ಪಟ್ಟು ಅಭಿವೃದ್ಧಿ ಪಡಿಸಿದ ದೇಶವನ್ನ ಬಿಜೆಪಿಯವರು 7 ವರ್ಷದಲ್ಲಿ ಮಾರಾಟ ಮಾರಾಟ ಮಾಡಿದ್ದಾರೆ. ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಪೆಟ್ರೋಲಿಯಂ, ಬಿಎಸ್ಎನ್ಎಲ್ನಂತಹ ಸಂಸ್ಥೆಗಳನ್ನ ಕಾಂಗ್ರೆಸ್ 70 ವರ್ಷಗಳ ಕಾಲ ಕಟ್ಟಿ ಬೆಳಿಸಿತ್ತು. ಆದರೆ, ಅವುಗಳನ್ನ ಇಂದು ಬಿಜೆಪಿ ಮಾರಾಟ ಮಾಡುತ್ತಿದೆ. ಹಣ ಇದ್ದ ಸಿರಿವಂತರನ್ನೆ ಉದ್ದಾರ ಮಾಡುವ ಕೆಲಸ ಬಿಜೆಪಿ ಮಾಡುತ್ತಿದ್ದು, ಬಡವರನ್ನ ಮಾತ್ರ ಬಡವರನ್ನಾಗೆ ಉಳಿಸಿದೆ ಎಂದು ಟೀಕೆ ಮಾಡಿದ್ದಾರೆ.