ಶಿವಮೊಗ್ಗ: ಕೌಟುಂಬಿಕ ವಿಚಾರಕ್ಕೆ ನಡೆದ ಗಲಾಟೆ ವಿಕೋಪಕ್ಕೆ ಹೋಗಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆದಿದ್ದು, ಹಲ್ಲೆಗೊಳಗಾದ ಇಬ್ಬರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿವಮೊಗ್ಗದ ಹೊರ ವಲಯ ಊರುಗಡೂರು(ಸೊಳೆಬೈಲು)ನಲ್ಲಿ ಶಬ್ಬಿರ್(32) ಹಾಗೂ ಶಹಬಾಜ್ (40) ಗಾಯಗೊಂಡವರು. ಶಬ್ಬಿರ್ನನ್ನು ಮೇಟ್ರೋ ಆಸ್ಪತ್ರೆಗೆ ದಾಖಲಿಸಿದರೆ, ಶಹಬಾಜ್ನನ್ನು ಮಲ್ನಾಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಗೊಂಡ ಶಬ್ಬೀರ್ ಸಹೋದರಿ ಸಲ್ಮೀಯಾ ಫರ್ದಿನ್ ಎಂಬ ವ್ಯಕ್ತಿಯನ್ನು ಪ್ರೀತಿಸಿ ಮದುವೆಯಾಗಿದ್ದರು. ಇದಕ್ಕೆ ಶಬ್ಬಿರ್ ವಿರೋಧ ವ್ಯಕ್ತಪಡಿಸಿದ್ದ. ಆದರೆ, ಸಲ್ಮೀಯಾ ಕೆಲ ತಿಂಗಳ ಹಿಂದೆ ಗಂಡ ಫರ್ದಿನ್ ಜೊತೆ ಜಗಳ ಮಾಡಿಕೊಂಡು ವಾಪಸ್ ತವರು ಮನೆಗೆ ಬಂದಿದ್ದರು. ಈ ಕುರಿತು ಶಬ್ಬಿರ್ ಹಾಗೂ ಆತನ ಸ್ನೇಹಿತರು ಫರ್ದಿನ್ಗೆ ಆಗಾಗ್ಗೆ ಬೆದರಿಕೆ ಹಾಕುತ್ತಿದ್ದರು. ಇದರಿಂದ ಕೋಪಗೊಂಡ ಫರ್ದಿನ್, ತನ್ನ ಸ್ನೇಹಿತರೊಂದಿಗೆ ಆಗಮಿಸಿ ಗಲಾಟೆ ಮಾಡಿದ್ದ. ಸೊಳೆಬೈಲು ಬಳಿ ಬೈಪಾಸ್ ರಸ್ತೆಯ ವೃತ್ತದಲ್ಲಿ ನಡೆದ ಗಲಾಟೆಯಲ್ಲಿ ಶಬ್ಬೀರ್ ಮೇಲೆ ಫರ್ದಿನ್ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದು, ಹಲ್ಲೆಯ ವಿಡಿಯೋ ವೈರಲ್ ಆಗಿದೆ.
ಶಬ್ಬೀರ್ ನೆಲದ ಮೇಲೆ ಬಿದ್ದರೂ ಸಹ ಆತನನನ್ನು ಬಿಡದೇ ಕೊಚ್ಚಿ ಹಾಕಿದ್ದಾನೆ. ಹಲ್ಲೆಯಿಂದ ಶಬ್ಬೀರ್ನ ಮೆದುಳು ಹೊರ ಬಂದಿದ್ದು, ಈತನ ಸ್ಥಿತಿ ಚಿಂತಾಜನಕವಾಗಿದೆ. ಶಹಬಾಜ್ ಕೂಡ ಗಾಯಗೊಂಡಿದ್ದಾನೆ. ಸುದ್ದಿ ತಿಳಿದು ಎಎಸ್ಪಿ ಕಾರ್ಯಪ್ಪ ಹಾಗೂ ತುಂಗಾನಗರ ಪೊಲೀಸ್ ಠಾಣೆಯ ಪಿಐ ಗುರುರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿರುವ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ ಎಂದು ಎಸ್ಪಿ ಮಿಥುನ್ ಕುಮಾರ್ ತಮ್ಮ ವಾಟ್ಸಪ್ ಗ್ರೂಪ್ನಲ್ಲಿ ಮಾಹಿತಿ ನೀಡಿದ್ದಾರೆ.
Laxmi News 24×7