ಮಾಜಿ ಸೈನಿಕರಿಗೆ ಉಚಿತ ಹಾಗೂ ಸಮರ್ಥ ಕಾನೂನು ಸೇವೆ
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಅಡಿಯಲ್ಲಿ ಸೈನಿಕರು ಹಾಗೂ ಮಾಜಿ ಸೈನಿಕರು, ವೀರನಾರಿಯರಿಗೆ ಉಚಿತ ಮತ್ತು ಸಮರ್ಥ ಕಾನೂನು ಸೇವೆಯನ್ನು ಒದಗಿಸಲು ವೀರ ಪರಿವಾರ್ ಸಹಾಯಕ ಯೋಜನೆ 2025 ರ ಹೆಸರಿನಲ್ಲಿ ಪ್ರಾರಂಭವಾಗಿರುವ ಸೇವೆಯ ಸದುಪಯೋಗವನ್ನು ಜಿಲ್ಲೆಯ ಸಮಸ್ತ ಸೈನಿಕರು, ಮಾಜಿ ಸೈನಿಕರು ವೀರನಾರಿಯರು ಪಡೆದುಕೊಳ್ಳಬೇಕೆಂದು ಮಹಾಒಕ್ಕೂಟದ ಜಿಲ್ಲಾಧ್ಯಕ್ಷ ಜಗದೀಶ ಪೂಜೇರಿ ತಿಳಿಸಿದ್ದಾರೆ.
ಇತ್ತೀಚಿಗೆ ಈ ಸೇವೆಗೆ ಬೆಳಗಾವಿಯ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಕಾರ್ಯಾಲಯದಲ್ಲಿ ಕೆಲಸ ನಿರ್ವಹಿಸಲು ಆಯ್ಕೆಯಾದ ವಕೀಲರು ಶ್ರೀಮತಿ ಅರ್ಚನಾ ಕೊರಗು ಅವರನ್ನು ಬೆಳಗಾವಿ ಜಿಲ್ಲೆ ಮಾಜಿ ಸೈನಿಕರ ಸಂಘಟನೆಗಳ ಮಹಾಒಕ್ಕೂಟದ ತಂಡ ಭೇಟಿಯಾಗಿ ಸೈನಿಕರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಅವುಗಳ ಪರಿಹಾರಕ್ಕಾಗಿ ಕೈಗೊಳ್ಳಬೇಕಾದಂತಹ ಕ್ರಮಗಳ ಬಗ್ಗೆ ಸುವಿಸ್ತಾರವಾಗಿ ವಕೀಲರೊಂದಿಗೆ ಚರ್ಚಿಸಲಾಯಿತು. ಈ ಯೋಜನೆ ಅಡಿಯಲ್ಲಿ ಸೈನಿಕರು ಹಾಗೂ ಮಾಜಿ ಸೈನಿಕರಿಗೆ ಯಾವ ರೀತಿಯ ಸವಲತ್ತುಗಳು ಸಿಗಲಿವೆ ಹಾಗೂ ಜಿಲ್ಲೆಯ 14 ತಾಲ್ಲೂಕುಗಳಲ್ಲಿ ಈ ಸೇವೆಯ ಅಡಿಯಲ್ಲಿ ಓರ್ವ ವಕೀಲರನ್ನು ನಿಯೋಜಿಸಲಾಗಿದೆ.
ವಕೀಲರ ಬಳಿ ಬರುವಂತಹ ಜಿಲ್ಲೆಯ ಎಲ್ಲಾ ಮಾಜಿ ಸೈನಿಕರು ಹಾಲಿ ಸೈನಿಕರು ಹಾಗೂ ವೀರನಾರಿಯರಿಗೆ ಧನಾತ್ಮಕವಾಗಿ ಸ್ಪಂದಿಸಿ ಅವರ ಸಮಸ್ಯೆಗಳ ಪರಿಹಾರಕ್ಕಾಗಿ ತಾವು ಪ್ರೀತಿಸಬೇಕೆಂದು ವಿನಂತಿ ಮಾಡಿಕೊಳ್ಳಲಾಯಿತು. ಬೆಳಗಾವಿಯ ಸೈನಿಕ ಕಲ್ಯಾಣ ಮತ್ತು ಪುನರ್ ವಸತಿ ಇಲಾಖೆಯಲ್ಲಿ ಪ್ರತಿ ಗುರುವಾರ ವಕೀಲರು ಉಪಸ್ಥಿತರಿರುತ್ತಾರೆ.
ಸೈನಿಕ ಸಮುದಾಯದ ಸಮಸ್ಯೆಯನ್ನು ಪರಿಹರಿಸುವ ಈ ಒಳ್ಳೆಯ ಕಾರ್ಯಕ್ಕೆ ನಿಯುಕ್ತಿಯಾದಂತಹ ವಕೀಲರನ್ನು ಮಹಾಒಕ್ಕೂಟದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಹಾಒಕ್ಕೂಟದ ಮಹಿಳಾ ಘಟಕದ ಅಧ್ಯಕ್ಷ ಶ್ರೀಮತಿ ಸುಮಿತಾ ಪಟ್ಟಣಶೆಟ್ಟಿ ಮಹಾಒಕ್ಕೂಟದ ಖಜಾಂಚಿಗಳಾದ ಸಂತೋಷ ಹಿರೇಮಠ ಸದಸ್ಯರಾದ ರುದ್ರಪ್ಪ ಗಿಡ್ಡಗೊಳ, ಸುಭಾಷ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.
Laxmi News 24×7