ದಾವಣಗೆರೆ: ಎಚ್.ಬಿ. ಕರಿಬಸಮ್ಮ 85 ವರ್ಷದ ವೃದ್ಧೆ. 30 ವರ್ಷಗಳ ಕಾಲ ಶಾಲಾ ಮಕ್ಕಳಿಗೆ ಒಳ್ಳೆಯ ಗುರುವಾಗಿ ನೀತಿ ಪಾಠ ಮಾಡಿ ನಿವೃತ್ತಿ ಆಗಿರುವ ಶಿಕ್ಷಕಿ. 24 ವರ್ಷಗಳ ಹಿಂದೆ ತಾನು ಅನುಭವಿಸಿದ ನರಕಯಾತನೆಗೆ ಮುಕ್ತಿ ಬಯಸಿದ್ದ ಎಚ್.ಬಿ. ಕರಿಬಸಮ್ಮ ಅವರು ಕಾನೂನಿನಡಿ ಘನತೆಯಿಂದ ಮರಣ ಹೊಂದುವ ಹಕ್ಕು ಸಿಗಬೇಕೆಂದು ಹೋರಾಡಿದವರಲ್ಲಿ ಇವರೂ ಒಬ್ಬರು.
ಕೇಂದ್ರ ಸರ್ಕಾರ ದಯಾಮರಣಕ್ಕೆ ಸಂಬಂಧಿಸಿದಂತೆ ಕಾನೂನಿನಡಿ ಮಾರ್ಗಸೂಚಿಗಳನ್ನು ತಯಾರು ಮಾಡುವಂತೆ ಆಯಾಯ ರಾಜ್ಯಗಳಿಗೆ ಸೂಚನೆ ನೀಡಿದೆ. ಅದರಂತೆ ನಮ್ಮ ರಾಜ್ಯ ಸರ್ಕಾರ ಇತ್ತೀಚೆಗೆ ರಾಜ್ಯದಲ್ಲಿ ಮಾರಣಾಂತಿಕ ರೋಗದಿಂದ ಗುಣಮುಖರಾಲು ಸಾಧ್ಯವೇ ಇಲ್ಲದ ರೋಗಿಗಳಿಗೆ ಗೌರವಯುತವಾಗಿ ಸಾಯುವ ಹಕ್ಕನ್ನು ಜಾರಿಗೊಳಿಸಿ ಆದೇಶ ಹೊರಡಿಸಿದೆ. ಇದು ಒಂದು ಕಡೆಯಿಂದ ಹೋರಾಟಗಾರ್ತಿ ಎಚ್.ಬಿ.ಕರಿಬಸಮ್ಮ ಅವರಿಗೆ ತಕ್ಕಮಟ್ಟಿಗೆ ಸಂದ ಜಯವಾಗಿದೆ.
ಹಸನ್ಮುಖಿ ಅಜ್ಜಿ ಕರಿಬಸಮ್ಮ : ಎಚ್.ಬಿ. ಕರಿಬಸಮ್ಮ ದಾವಣಗೆರೆಯ ಎಂಸಿಸಿ ಎ ಬ್ಲಾಕ್ ಕುವೆಂಪು ನಗರದಲ್ಲಿರುವ ಆಶ್ರಯ ಫೌಂಡೇಷನ್ ವಯೋವೃದ್ಧರ ಆರೈಕೆ ಕೇಂದ್ರದಲ್ಲಿದ್ದುಕೊಂಡು ದಿನಗಳನ್ನು ಎಣಿಸುತ್ತಿದ್ದಾರೆ. ರಾಮಾಯಣದಲ್ಲಿ ಪ್ರಭು ಶ್ರೀರಾಮನಿಗಾಗಿ ಶಬರಿ ಕಾದಂತೆ, ಈ ಕರಿಬಸಮ್ಮ ಭಾರತದಲ್ಲಿ ದಯಾಮರಣ ಕಾನೂನು ಜಾರಿ ಮಾಡುವಂತೆ 24 ವರ್ಷಗಳಿಂದ ಕಾದಿದ್ದಾರೆ. ಸ್ಲಿಪ್ ಡಿಸ್ಕ್, ಸಕ್ಕರೆ ಕಾಯಿಲೆ, ಕ್ಯಾನ್ಸರ್ ಎಂಬ ಮಹಾಮಾರಿ ಕಾಯಿಲೆಗಳಿಗೆ ತುತ್ತಾಗಿರುವ ಇವರು ದಯಾಮರಣ ಕೋರಿದ್ದಾರೆ.
ಈ ಕಾನೂನು ನಮ್ಮ ದೇಶದಲ್ಲಿ ಇಲ್ಲದ ಕಾರಣ ರೋಗಿಗಳು ಘನತೆಯಿಂದ ಮರಣ ಹೊಂದುವ ಹಕ್ಕು ಕರ್ನಾಟಕ ಸೇರಿದಂತೆ ದೇಶದಲ್ಲಿ ಜಾರಿಗೆ ಬರಬೇಕು ಎಂಬುದು ಇವರ ಜೀವನ ಪರ್ಯಂತದ ಹೋರಾಟ ಆಗಿತ್ತು. ಇದೀಗ ರಾಜ್ಯದಲ್ಲಿ ದಯಾಮರಣ ಅನುಷ್ಠಾನಕ್ಕೆ ಬಂದಿದ್ದು, ಸರ್ಕಾರ ರೂಪುರೇಷೆ ತಯಾರಿಯಲ್ಲಿದೆ.
Laxmi News 24×7