ತುಮಕೂರು: ಮಧುಗಿರಿ ತಾಲೂಕಿನ ಬೆಡತ್ತೂರು ಗ್ರಾಮದ ಬಳಿ ಪ್ರತಿನಿತ್ಯ ಕರಡಿಗಳು ಕಾಣಿಸಿಕೊಳ್ಳುತ್ತಿದ್ದು, ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.ಗ್ರಾಮದ ಪಿಲ್ಲೆಕಮ್ಮ ದೇವಸ್ಥಾನದ ಬಳಿ ಭಾನುವಾರ ಕರಡಿಯೊಂದು ಕಾಣಿಸಿಕೊಂಡಿದೆ. ಕರಡಿ ದೇವಸ್ಥಾನ ಪ್ರವೇಶಿಸುತ್ತಿರುವ ವಿಡಿಯೋವನ್ನು ಗ್ರಾಮದ ಶಿವರಾಜು ಎಂಬುವರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಬಳಿಕ ಗ್ರಾಮಸ್ಥರ ಕೂಗಾಟ ಚೀರಾಟ ಕೇಳಿ ಕರಡಿ ದೇವಸ್ಥಾನದಿಂದ ಕಾಡಿನತ್ತ ತೆರಳಿದೆ.
ಈ ಭಾಗದಲ್ಲಿ ನಾಲ್ಕೈದು ಕರಡಿಗಳು ಓಡಾಡಿಕೊಂಡಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಈ ಬಗ್ಗೆ ಹಲವು ಬಾರಿ ಅರಣ್ಯ ಇಲಾಖೆಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.