ಬೆಂಗಳೂರು: ಇಂದಿನಿಂದ ಇದೇ 15 ರವರೆಗೆ ವಿಧಾನ ಮಂಡಲದ ಚಳಿಗಾಲದ ಅಧಿವೇಶನ ನಡೆಯಲಿದೆ. ಉಭಯ ಸದನಗಳ ಕಲಾಪಗಳಲ್ಲೂ ಆಡಳಿತ ಪಕ್ಷ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಮಧ್ಯೆ ಪರಸ್ಪರ ವಾಕ್ಸಮರ ನಡೆಯಲಿದೆ.
ಸರ್ಕಾರದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಮುಗಿ ಬೀಳಲು ಕಾಂಗ್ರೆಸ್ ಪ್ಲಾನ್ ಮಾಡಿಕೊಂಡಿದೆ. ನೆರೆ ಪರಿಹಾರದಲ್ಲಿನ ವೈಫಲ್ಯ, ಕೇಂದ್ರದಿಂದ ಪರಿಹಾರ ಬಿಡುಗಡೆಯಲ್ಲಿನ ತಾರತಮ್ಯ, ರೈತರ ಸಮಸ್ಯೆಗಳು, ಕೊರೊನಾ ನಿಯಂತ್ರಿಸುವಲ್ಲಿ ಸರ್ಕಾರದ ವೈಫಲ್ಯ, ಸಚಿವ ಸಂಪುಟ ವಿಸ್ತರಣೆಯ ಗೊಂದಲಗಳಿಂದ ಆಡಳಿತದ ಮೇಲೆ ಆಗಿರುವ ಪರಿಣಾಮಗಳು, ನಾಯಕತ್ವ ಬದಲಾವಣೆಯ ಚರ್ಚೆ, ಬಿಜೆಪಿಯಲ್ಲಿ ನಡೆದಿರುವ ರಾಜಕೀಯ ವಿದ್ಯಮಾನಗಳು. ಈ ಎಲ್ಲವನ್ನು ಸದನದಲ್ಲಿ ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸೋದು ಕಾಂಗ್ರೆಸ್ ಪ್ಲಾನ್ ಆಗಿದೆ.
ಜೆಡಿಎಸ್ ಸಹ ತನ್ನ ವ್ಯಾಪ್ತಿಯಲ್ಲಿ ಸರ್ಕಾರದ ವೈಫಲ್ಯ ಬಯಲಿಗೆಳೆಯಲು ಸಿದ್ಧವಾಗಿದೆ. ಪ್ರತಿಪಕ್ಷಗಳಿಗೆ ಚರ್ಚೆ, ಅಂಕಿ ಅಂಶಗಳ ಮೂಲಕ ತಕ್ಕ ಉತ್ತರ ಕೊಡಲು ಬಿಜೆಪಿಯೂ ಪ್ರತ್ಯಾಸ್ತ್ರ ಹೂಡಲಿದೆ. ಈ ಅಧಿವೇಶನದಲ್ಲಿ ಗೋಹತ್ಯೆ ತಡೆ ಮತ್ತು ಲವ್ ಜಿಹಾದ್ ತಡೆ ವಿಧೇಯಕಗಳು ಮಂಡನೆಗೂ ಬಿಜೆಪಿ ಪ್ಲಾನ್ ರೂಪಿಸುತ್ತಿದೆ.
ಈ ಎರಡೂ ವಿಧೇಯಕಗಳೂ ಕಲಾಪಗಳಲ್ಲಿ ದೊಡ್ಡ ಕೋಲಾಹಲ ಸೃಷ್ಟಿಸಲಿವೆ. ಸರ್ಕಾರ ಲವ್ ಜಿಹಾದ್ ತಡೆ ಮತ್ತು ಗೋಹತ್ಯೆ ನಿಷೇಧ ಸೇರಿದಂತೆ 10 ಮಸೂದೆಗಳನ್ನು ಮಂಡಿಸಲು ಬಿಜೆಪಿ ಮುಂದಾಗಿದೆ. ಗೋಹತ್ಯೆ ಮತ್ತು ಲವ್ ಜಿಹಾದ್ ತಡೆ ಮಸೂದೆಗಳಿಗೆ ಕಾಂಗ್ರೆಸ್ ಈಗಾಗಲೇ ವಿರೋಧ ವ್ಯಕ್ತಪಡಿಸಿರುವುದರಿಂದ ಅಧಿವೇಶನದಲ್ಲಿ ಕೋಲಾಹಲ, ಗದ್ದಲಗಳು ಸೃಷ್ಟಿಯಾಗೋದು ಖಚಿತ.