ಬಳ್ಳಾರಿ: ಗಣಿ ಜಿಲ್ಲೆ ಬಳ್ಳಾರಿ ರೆಡ್ಡಿಗಳ ಮೂಲಕ ದೇಶದಲ್ಲಿಯೇ ಗುರುತಿಸಿಕೊಳ್ಳುವಂತಾಗಿತ್ತು. ಆದರೆ ದಿನೇ ದಿನೇ ರೆಡ್ಡಿಗಳ ಪಾರುಪತ್ಯ ಜಿಲ್ಲೆಯಲ್ಲಿ ಕಡಿಮೆಯಾದಂತೆ ಕಾಣಿಸುತ್ತಿದೆ. ಅದರಲ್ಲೂ ಅಖಂಡ ಬಳ್ಳಾರಿ ಜಿಲ್ಲೆ ಇಬ್ಭಾಗವಾದ ಮೇಲಂತೂ ಈ ಸಂಶಯ ರಾಜಕೀಯ ವಲಯದಲ್ಲಿ ಮತ್ತಷ್ಟು ಜೋರಾಗಿದೆ. ಇದೆಲ್ಲದರ ನಡುವೆಯೂ ಸಚಿವ ರಾಮುಲು, ರೆಡ್ಡಿ ಬ್ರದರ್ಸ್ ಜೊತೆಗಿದ್ದರೆ ಯಾರು ಏನು ಮಾಡಿಕೊಳ್ಳಲು ಆಗಲ್ಲ ಎಂಬ ಮಾತಿತ್ತು. ಆದರೀಗ ಬದಲಾದ ರಾಜಕೀಯ ಸನ್ನಿವೇಶದಲ್ಲಿ ರೆಡ್ಡಿ ಬ್ರದರ್ಸ್ ಮತ್ತು ರಾಮುಲು ನಡುವೆ ಬಿರುಕು ಉಂಟಾಗಿದೆ.
ಈ ಹಿಂದೆ ವಿಜಯನಗರ ಜಿಲ್ಲೆ ರಚನೆ ವಿರೋಧಿಸಿದ್ದ ಸಚಿವ ರಾಮುಲು ತಮ್ಮ ನಡೆ ಬದಲಿಸಿದ್ದಾರೆ. ರಾಮುಲು ವಿಜಯನಗರ ಜಿಲ್ಲೆ ರಚನೆ ಪರ ಬ್ಯಾಟ್ ಬೀಸಿದ ಪರಿಣಾಮ ಬಳ್ಳಾರಿಯಲ್ಲಿ ಹೊಸ ರಾಜಕೀಯ ಬೆಳವಣಿಗೆಗೆ ಕಾರಣವಾಗಿದೆ. ಸಚಿವ ಆನಂದ್ ಸಿಂಗ್ ಜೊತೆ ರಾಮುಲು ರಾಜಕೀಯ ಒಪ್ಪಂದಕ್ಕೆ ಒಳಗಾಗಿ ನೂತನ ಜಿಲ್ಲೆ ರಚನೆಗೆ ಕೈ ಜೋಡಿಸಿದರು ಎಂಬ ಆರೋಪ ಕೇಳಿ ಬಂದಿದೆ. ಇದುವೇ ರೆಡ್ಡಿ ಬ್ರದರ್ಸ್ ಮುನಿಸಿಗೆ ಕಾರಣ ಎಂಬ ಮಾತು ಕೇಳಿ ಬಂದಿದೆ.