ಬೆಂಗಳೂರು : ಸಚಿವ ಸಂಪುಟ ಪುನಾರಚನೆಯಲ್ಲಿ ಶಾಸಕ ಉಮೇಶ ಕತ್ತಿ ಅವರಿಗೆ ಸಚಿವ ಸ್ಥಾನ ಸಿಗುವುದು ಬಹುತೇಕ ಖಚಿತವಾಗಿದ್ದು, ಈಗಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಸಂಪುಟದಿಂದ ಕೈ ಬಿಡುವ ಸಾಧ್ಯತೆ ಇದೆ.
ನಿನ್ನೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ದೆಹಲಿಗೆ ತೆರಳಿ ಪಕ್ಷದ ನಾಯಕರೊಂದಿಗೆ ಚರ್ಚಿಸಿ, ಪಟ್ಟಿ ನೀಡಿದ್ದಾರೆ. ಸುಮಾರು 50 ನಿಮಿಷಗಳ ಕಾಲ ಸಿಎಂ ಬಿಎಸ್ ವೈ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾವರ ನಡುವೆ ಸಚಿವ ಸಂಪುಟ ಪುನಾರಚನೆ ಬಗ್ಗೆ ಚರ್ಚೆ ನಡೆದಿದೆ. ಎಡ್ಮೂರು ದಿನಗಳಲ್ಲಿ ಪಟ್ಟಿಗೆ ಹಸಿರು ನಿಶಾನೆ ತೋರುವುದಾಗಿ ನಡ್ಡಾ ಭರವಸೆ ನೀಡಿದ್ದಾರೆಂದು ಹೇಳಲಾಗುತ್ತಿದೆ.
ರಾಜಕೀಯ ಲೆಕ್ಕಾಚಾರಾ ?
ಬೆಳಗಾವಿ ಜಿಲ್ಲೆಯಲ್ಲಿ ಉಮೇಶ ಕತ್ತಿ ಬಿಜೆಪಿ ಹಿರಿಯ ನಾಯಕ, 8 ಬಾರಿ ಶಾಸಕರಾಗಿದ್ದಾರೆ. ಅವರಿಗೆ ಈ ಹಿಂದೆ ಸಚಿವ ಸ್ಥಾನ ದೊರೆಯಬೇಕಿತ್ತು. ಆದರೆ ಪಕ್ಷದಲ್ಲಿನ ಅಸಮಾಧಾನ ತಣ್ಣಗಾಗಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹಿರಿಯ ನಾಯಕರನ್ನು ಬಿಟ್ಟು ಸಚಿವ ಸ್ಥಾನ ಹಂಚಿಕೆ ಮಾಡಿದ್ದರು. ಇದರಿಂದ ಈ ಬಾರಿ ಸಂಪುಟ ಪುನರಾಚನೆಯಲ್ಲಿ ಜಿಲ್ಲೆಯಲ್ಲಿ ಸಚಿವೆ ಜೊಲ್ಲೆ ಅವರನ್ನು ಕೈ ಬಿಟ್ಟು, ಉಮೇಶ ಕತ್ತಿ ಅವರಿಗೆ ಸಚಿವ ಸ್ಥಾನ ನೀಡುವ ಚಿಂತನೆ ನಡೆದಿದೆ ಎನ್ನಲಾಗುತ್ತಿದೆ.
ಇನ್ನೊಂದೆಡೆ ಅನಾರೋಗ್ಯದಿಂದ ಬಳಲುತ್ತಿರುವ ಸಚಿವ ಶ್ರೀಮಂತ ಪಾಟೀಲ ಅವರನ್ನು ಸಹ ಸಂಪುಟದಿಂದ ಕೈ ಬಿಡಲಾಗುತ್ತಿದೆ ಎಂದು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿವೆ. ಜೊಲ್ಲೆ ಜಾಗಕ್ಕೆ ಮಹಿಳಾ ಕೋಟಾದಲ್ಲಿ ಶಾಸಕಿ ಪೂರ್ಣಿಮಾ ಅವರಿಗೆ ಸ್ಥಾನ ಕಲ್ಪಿಸುವ ಚಿಂತನೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದ್ದಾರೆ.