ಬೆಳಗಾವಿ (Belagavi)ಲೋಕಸಭಾ ಕ್ಷೇತ್ರದ ಟಿಕೆಟ್ ನನಗೆ ಸಿಗುವ ವಿಶ್ವಾಸ ಇತ್ತು. ಪಕ್ಷದ ವರಿಷ್ಠರು ನನಗೆ ಟಿಕೆಟ್ ಘೋಷಣೆ ಮಾಡಿದ್ದಾರೆ. ಬೆಳಗಾವಿಯಲ್ಲಿ ಕೆಲಸ ಮಾಡಲು ನನಗೆ ಅವಕಾಶ ಕೊಟ್ಟಿದ್ದಾರೆ. ಹೀಗಾಗಿ ನರೇಂದ್ರ ಮೋದಿ, ಅಮಿತ್ ಶಾ, ಜೆಪಿ ನಡ್ಡಾ, ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ (Jagadish Shettar) ಹೇಳಿದ್ದಾರೆ.
ಬೆಳಗಾವಿ ಟಿಕೆಟ್ ಘೋಷಣೆ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶೆಟ್ಟರ್, ಬೆಳಗಾವಿಯಲ್ಲಿ ಮತ್ತೊಮ್ಮೆ ಬಿಜೆಪಿ ಗೆಲ್ಲಲಿದೆ. ಸುರೇಶ್ ಅಂಗಡಿ ಅವರ ಕೆಲಸ ಇನ್ನು ಬೆಳಗಾವಿ ಜನರಿಗೆ ನೆನಪಿದೆ. ಅವರ ಪತ್ನಿ ಮಂಗಳಾ ಅಂಗಡಿ ಕೂಡಾ ಉತ್ತಮ ಕೆಲಸ ಮಾಡಿದ್ದಾರೆ. ಬೆಳಗಾವಿಯ ಎಲ್ಲ ನಾಯಕರ ಜೊತೆ ನಾನು ಮಾತನಾಡಿದ್ದೇನೆ. ಯಾವುದೇ ಅಸಮಾಧಾನ ಇಲ್ಲ. ಎಲ್ಲವೂ ಸರಿ ಹೋಗಿದೆ. ಕಳೆದ ಒಂದು ವಾರದಿಂದ ನಾನು ಸ್ಥಳೀಯ ನಾಯಕರ ಜೊತೆ ಮಾತನಾಡಿದ್ದೇನೆ ಎಂದರು.
ಪಕ್ಷದ ನಾಯಕರು ಹೆಚ್ಚಿನ ಕೆಲಸ ಮಾಡಲು ನನಗೆ ಅವಕಾಶ ಕೊಟ್ಟಿದ್ದಾರೆ. ನಾನು ನಾಳೆ ಅಥವಾ ನಾಡಿದ್ದು ಬೆಳಗಾವಿಗೆ ಹೋಗುತ್ತೇನೆ. ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದ ಜಗದೀಶ್ ಶೆಟ್ಟರ್, ನಾನು ವಿರೋಧ ಪಕ್ಷದ ನಾಯಕನಿದ್ದಾಗ ಬೆಳಗಾವಿಯಲ್ಲಿ ತಳಮಟ್ಟದ ಸಂಘಟನೆ ಮಾಡಿದ್ದೇನೆ ಎಂದರು. ಕೇವಲ ಹಣದ ಮೇಲೆ ಚುನಾವಣೆ ನಡೆಯಲ್ಲ. ಇದು ಮೋದಿ ಅವರ ಚುನಾವಣೆ, ದೇಶದ ಚುನಾವಣೆ. ಹೀಗಾಗಿ ನಾನು ಗೆಲ್ಲುತ್ತೇನೆ ಎಂದರು.