ಹಾಸನ, ಜನವರಿ 25: ಅಸ್ಸಾಂನಲ್ಲಿ ಕೆಲವು ಆಂತರಿಕ ವಿಚಾರಗಳ ಬಗ್ಗೆ ಚರ್ಚೆ ಇದೆ, ಸಂಘರ್ಷದ ಪರಿಸ್ಥಿತಿ ಇದೆ.
ಇದು ಗೊತ್ತಿದ್ದರೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅಲ್ಲಿಗೆ ಹೋಗಿದ್ದೇಕೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್ಡಿ ದೇವೇಗೌಡರು (HD Deve Gowda) ಪ್ರಶ್ನಿಸಿದರು. ಹಾಸನದಲ್ಲಿ ತಾಲೂಕುವಾರು ಸಭೆ ನಡೆಸಿ ಪಕ್ಷದ ಎಲ್ಲಾ ಹಂತದ ಚುನಾಯಿತ ಹಾಲಿ ಹಾಗೂ ಮಾಜಿ ಸದಸ್ಯರ ಭೇಟಿಯಾಗುತ್ತಿರುವ ಸಂದರ್ಭ ದೇವೇಗೌಡರು ಮಾತನಾಡಿದರು. ರಾಹುಲ್ ಗಾಂಧಿಯ ನ್ಯಾಯ ಯಾತ್ರೆಗೆ ಅಸ್ಸಾಂನಲ್ಲಿ ಪೊಲೀಸರು ಅಡ್ಡಿಪಡಿಸಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅಲ್ಲಿನ ವಿಚಾರ ಗೊತ್ತಿದ್ದೂ ಗೊತ್ತಿದ್ದೂ ಅವರು ಹೋಗಿದ್ದೇಕೆ ಎಂದು ಪ್ರಶ್ನಿಸಿದರು.
ಐಎನ್ಡಿಐಎ ಮೈತ್ರಿಕೂಟದಿಂದ ಪಶ್ಚಿಮ ಬಂಗಾಳ ಸಿಎಂ, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಹಿಂದೆ ಸರಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದು ಕೇವಲ ಮಮತಾ ಬ್ಯಾನರ್ಜಿ ಅವರಿಗೆ ಸಂಬಂಧಿಸಿದ್ದಲ್ಲ. ಸಾಕಷ್ಟು ನಾಯಕರ ಅಭಿಪ್ರಾಯ ಬೇರೆ ರೀತಿ ಇದೆ. ಈ ದೇಶದಲ್ಲಿ ಪ್ರಾದೇಶಿಕ ಪಕ್ಷಗಳು ಒಂದಾಗಿ ಸ್ಥಿರ ಸರ್ಕಾರ ಕೊಡುವುದಾಗಿ ಹೇಳುವ ಮನೋಭಾವ ಇಲ್ಲ. ಮುಂದಿನ ದಿನಗಳಲ್ಲಿ ಆಶ್ಚರ್ಯಕರ ಬೆಳವಣಿಗೆ ಆದರೆ ನೋಡೋಣ ಎಂದರು.
ಅಯೋದ್ಯೆ ರಾಮ ಮಂದಿರವನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂಬ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, ಸಚಿವ ರಾಜಣ್ಣ ಒಂದು ಅಭಿಪ್ರಾಯ ಹೇಳ್ತಾರೆ. ನ್ನೊಬ್ಬರು ನಾನೆ ಶಿವ, ಸಿದ್ದರಾಮಯ್ಯ ಅವರೇ ರಾಮ ಎನ್ನುತ್ತಾರೆ. ಆದರೆ, ಇರುವುದು ಒಬ್ಬನೇ ರಾಮ ಅಲ್ಲವೇ? ಎಷ್ಟೇ ದೇವಾಲಯ ಕಟ್ಟಿದರೂ ರಾಮ ಒಬ್ಬನೇ. ನಮ್ಮವರೇ ಆದ ಶಿಲ್ಪಿ ಅದ್ಭುತವಾಗಿ ರಾಮನ ಮೂತ್ರಿ ಕೆತ್ತಿದಾರೆ ಎಂದರು.