ಬೆಂಗಳೂರು: ರಾಜರಾಜೇಶ್ವರಿ ನಗರ ಮತ್ತು ಶಿರಾ ಕ್ಷೇತ್ರಗಳನ್ನು ಬಿಜೆಪಿ ಜಯಗಳಿಸಿದರೂ ಈ ಗೆಲುವನ್ನು ಸಿಎಂ ಯಡಿಯೂರಪ್ಪ ಆಸ್ವಾದಿಸುವ ಸ್ಥಿತಿಯಲ್ಲಿ ಇದ್ದಂತೆ ಕಾಣುತ್ತಿಲ್ಲ. ಸಿಎಂ ಯಡಿಯೂರಪ್ಪ ಮುಂದೆ ಕ್ಯಾಬಿನೆಟ್ ಭರ್ತಿ ಮಾಡುವ ಸವಾಲಿದ್ದು ಯಾರನ್ನು ಸೇರಿಸಬೇಕು ಎನ್ನುವುದೇ ದೊಡ್ಡ ತಲೆನೋವಾಗಿದೆ.
ಶೀಘ್ರವೇ ಸಂಪುಟಕ್ಕೆ ಸರ್ಜರಿ ನಡೆಯಲಿರುವ ಹಿನ್ನೆಲೆಯಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಿದೆ. ಈ ವೇಳೆ, ಮೂಲ ಬಿಜೆಪಿಗರನ್ನು, ಮಿತ್ರಮಂಡಳಿಯನ್ನು ಜೊತೆಜೊತೆಯಲ್ಲೇ ಕರೆದೊಯ್ಯುವ ಅನಿವಾರ್ಯತೆ ಇದೆ.
ದೀಪಾವಳಿ ಬಳಿಕ ಅಂದರೆ ನವೆಂಬರ್ 19 ಅಥವಾ ನವೆಂಬರ್ 23ಕ್ಕೆ ಸಂಪುಟಕ್ಕೆ ಸರ್ಜರಿ ನಡೆಸಲು ಸಿಎಂ ಚಿಂತನೆ ನಡೆಸಿದ್ದಾರೆ. ಒಂದೆರಡು ದಿನಗಳಲ್ಲಿ ಹೈಕಮಾಂಡ್ ಜೊತೆ ಸಂಪುಟ ಸರ್ಜರಿ ಬಗ್ಗೆ ಯಡಿಯೂರಪ್ಪ ಮಾತುಕತೆ ನಡೆಸಲಿದ್ದಾರೆ. ಆದರೆ ಬಿಹಾರದಲ್ಲಿ ಸರ್ಕಾರ ಸ್ಥಾಪನೆ ಬಳಿಕ ಕರ್ನಾಟಕ ಸಂಪುಟ ವಿಚಾರಕ್ಕೆ ಹೈಕಮಾಂಡ್ ತಲೆ ಹಾಕುವ ಸಂಭವ ಇದೆ.
ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಪೈಕಿ ಹೈಕಮಾಂಡ್ ಏನು ಹೇಳಿದ್ರೂ ಅದಕ್ಕೆ ಸಮ್ಮತಿ ನೀಡಲು ಯಡಿಯೂರಪ್ಪ ಪ್ಲಾನ್ ಮಾಡ್ಕೊಂಡಿದ್ದಾರೆ. ಸದ್ಯ ಸಿಎಂ ಯಡಿಯೂರಪ್ಪ ಮುಂದೆ ಮೂರು ಆಯ್ಕೆಗಳಿವೆ.
ಸೂತ್ರ – 1
ಸದ್ಯಕ್ಕೆ ಸಂಪುಟ ವಿಸ್ತರಣೆ ಮಾಡಿ ಖಾಲಿ ಇರುವ 7 ಸ್ಥಾನಗಳ ಪೈಕಿ 6 ಸ್ಥಾನ ತುಂಬುವುದು. ಇದರಲ್ಲಿ 3 ಬಿಜೆಪಿಯ ಮೂಲ ಶಾಸಕರಿಗೆ, 3 ವಲಸೆ ಹಕ್ಕಿಗಳಿಗೆ ನೀಡುವುದು. ಮಸ್ಕಿ ಚುನಾವಣೆ ಹಿನ್ನೆಲೆಯಲ್ಲಿ 1 ಸ್ಥಾನ ಉಳಿಸಿಕೊಳ್ಳುವುದು.
ಸೂತ್ರ – 2
ಸಚಿವ ಸಂಪುಟ ಪುನಾರಚನೆ ಮಾಡುವುದು. ಪುನಾರಚನೆ ಮಾಡಿದರೆ ಹಾಲಿ ನಾಲ್ಕು ಸಚಿವರಿಗೆ ಕೊಕ್ ಕೊಡಬೇಕಾಗುತ್ತದೆ. ಆಗ ಒಟ್ಟು 11 ಸ್ಥಾನ ಖಾಲಿ ಉಳಿಯುತ್ತದೆ. 1 ಖಾಲಿ ಉಳಿಸಿಕೊಂಡು, 10 ಸ್ಥಾನವನ್ನು ತುಂಬುವುದು. 7 ಬಿಜೆಪಿ ಶಾಸಕರಿಗೆ, 3 ವಲಸೆ ಹಕ್ಕಿಗಳಿಗೆ ನೀಡುವುದು.
ಸೂತ್ರ – 3
ಬಿಜೆಪಿ ಹೈಕಮಾಂಡ್ ಸೂಚನೆಯಂತೆ ನಡೆದುಕೊಳ್ಳುವುದು. ಬಿಹಾರದಲ್ಲಿ ಸರ್ಕಾರ ಅಸ್ತಿತ್ವಕ್ಕೆ ಬರುವ ತನಕ ಕಾಯುವುದು. ಡಿಸೆಂಬರ್ ತನಕ ಸಂಪುಟ ಸರ್ಜರಿ ಮುಂದೂಡುವುದು. ವಲಸಿಗರನ್ನು ಸಮಾಧಾನ ಪಡಿಸುವ ಹೊಣೆ ಹೊರುವುದು.