ಬೆಂಗಳೂರು: ಎರಡು ಉಪಚುನಾವಣೆಯಲ್ಲಿನ ಸೋಲು ಕಾಂಗ್ರೆಸ್ನಲ್ಲಿ ಆಂತರಿಕ ಕಲಹ ಭುಗಿಲೇಳುವ ಸಾಧ್ಯತೆ ಕಂಡು ಬರುತ್ತಿದೆ. ಚುನಾವಣಾ ಅಖಾಡದಲ್ಲಿ ಹಿರಿಯರನ್ನು ಕಡೆಗಣಿಸಿ ನಾವೇ ಮೇಲು ಎಂದು ಓಡಾಡಿದವರ ವಿರುದ್ಧ ತಂಡವೊಂದು ಹೈಕಮಾಂಡ್ಗೆ ದೂರು ಕೊಡಲು ಚಾರ್ಜ್ಶೀಟ್ ಸಿದ್ದಪಡಿಸುತ್ತಿದೆ ಎನ್ನಲಾಗಿದೆ.
ಕೆಲವರು ಪಕ್ಷದ ಶಿಸ್ತು ಮೀರಿ ಸಿಎಂ ಜಪ ಮಾಡಿದ್ದು, ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಿತು. ತಮ್ಮ ಬೆಂಬಲಿಗರ ಆಟಾಟೋಪಕ್ಕೆ ಬ್ರೇಕ್ ಹಾಕದೇ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಪರೋಕ್ಷವಾಗಿ ಕುಮ್ಮಕ್ಕು ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಿದ್ದಾರೆ ಎಂದು ತಿಳಿದುಬಂದಿದೆ.
ಉಪ ಫಲಿತಾಂಶದ ಬಗ್ಗೆ ಹಿರಿಯ ನಾಯಕ ಎಸ್ಎಂ ಕೃಷ್ಣ ಮಾತನಾಡಿ, ದೇಶದಲ್ಲಿ ಬದಲಾವಣೆ ಆಗ್ತಿದೆ. ಕಾಂಗ್ರೆಸ್ ಅವನತಿಯತ್ತ ಸಾಗುತ್ತಿದೆ. ಬಿಜೆಪಿ ತನ್ನ ಪ್ರಖರತೆ ಹೆಚ್ಚಿಸಿಕೊಳ್ತಿದೆ. ಮೋದಿ ಒಬ್ಬ ರಾಜ ಋಷಿ ಅಂತಾ ಹೊಗಳಿದ್ದಾರೆ.
ಉಪಚುನಾವಣೆ ಸೋಲಿನ ಬಳಿಕ ಸಿದ್ದರಾಮಯ್ಯ ವಿಮರ್ಶೆ ಮಾಡಿದ ಬಗ್ಗೆ ನಾನು ಪ್ರತಿಕ್ರಿಯೆ ನೀಡೋದಿಲ್ಲ. ಸೋತ ಮೇಲೆ ನಾನಾ ಆಂಗಲ್ ನಲ್ಲಿ ವಿಮರ್ಶೆ ಮಾಡುತ್ತಾರೆ ಎಂದು ಹೇಳಿದರು.
ಮಾಜಿ ಸಚಿವ ಸಿಟಿ ರವಿ ಮಾತನಾಡಿ, ಎಲ್ಲಿದೆ ಬಿಜೆಪಿ ಅಲೆ ಎಂದು ಸಿದ್ದರಾಮಯ್ಯ ಕೇಳಿದ್ರು. ಈಗಲೂ ಬಿಜೆಪಿ ಅಲೆ ಇಲ್ಲ ಅಂದ್ರೆ ಸಿದ್ದರಾಮಯ್ಯಗೆ ದೋಷ ಇದೆ ಎಂದರ್ಥ ಎಂದು ಕಾಲೆಳೆದರು. ಡಿಸಿಎಂ ಲಕ್ಷಣ ಸವದಿ ಅವರು ಕಾಂಗ್ರೆಸ್ ಪಕ್ಷ ಎರಡು ಹೋಳಾದ್ರೂ ಅಚ್ಚರಿ ಇಲ್ಲ ಎಂದು ಭವಿಷ್ಯ ನುಡಿದರು.