ಮೂಡಲಗಿ: ‘ಶಿಕ್ಷಕ ವೃತ್ತಿ ಪವಿತ್ರವಾದದ್ದು, ಶ್ರದ್ಧೆ, ಪ್ರಮಾಣಿಕತೆಯಿಂದ ವೃತ್ತಿ ಧರ್ಮ ಕಾಯ್ದುಕೊಂಡು ಕರ್ತವ್ಯ ನಿರ್ವಹಿಸಿದಾಗ ಮಾತ್ರ ಸಾರ್ವಜನಿಕ ಬದುಕಿನಲ್ಲಿ ನೆಮ್ಮದಿಯ ವಾತಾವರಣ ದೊರೆಯುತ್ತದೆ’ ಎಂದು ಧಾರವಾಡದ ಹೆಚ್ಚುವರಿ ಆಯುಕ್ತರ ಕಚೇರಿಯ ನಿವೃತ್ತ ಸಹಾಯಕ ನಿರ್ದೇಶಕ ಗಜಾನನ ಮನ್ನಿಕೇರಿ ಹೇಳಿದರು.
ಸಮೀಪದ ತಿಗಡಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡ ಸುಣಧೋಳಿ ಸಮೂಹ ವ್ಯಾಪ್ತಿಯ ಶಿಕ್ಷಕರ ವತಿಯಿಂದ ಹಮ್ಮಿಕೊಂಡಿದ್ದ ಸತ್ಕಾರ ಹಾಗೂ ಅಭಿನಂದನಾ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿದರು.
ಮಕ್ಕಳಲ್ಲಿ ಆದರ್ಶಪ್ರಾಯವಾದ ನೈತಿಕ ಮೌಲ್ಯಗಳನ್ನು ತುಂಬಿ, ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ. ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದರು.
ಬಿಇಒ ಅಜಿತ ಮನ್ನಿಕೇರಿ ಮಾತನಾಡಿ, ಮಕ್ಕಳ ಸರ್ವೋತೋಮುಖ ಬೆಳವಣಿಗೆಯಲ್ಲಿ ನಾವು ಮಾಡುವ ಕಾರ್ಯಗಳಿಗೆ ಮನ್ನಣೆ ಸಿಗುತ್ತದೆ ಎಂದರು.
ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಎಸ್.ಆರ್. ಪತ್ತಾರ, ಮುಖ್ಯ ಶಿಕ್ಷಕ ರಮೇಶ ಬುದ್ನಿ, ಸುಭಾಸ ಬಾಗೋಜಿ, ಮಲ್ಲಮ್ಮ ಹುಚ್ಚಮಲನವರ, ಅವ್ವಣ್ಣ ಮೋಡಿ, ಸಿಆರ್ಪಿ ಹನಮಂತ ಬೆಳಗಲಿ, ಶಿಕ್ಷಕ ಸಂಘಟನೆಯ ಎಲ್.ಎಂ. ಬಡಕಲ್, ಬ್ರಹ್ಮಾನಂದ ಕುರುಬಚನ್ನಾಳ, ಪಿ.ಬಿ. ಕುಲಕರ್ಣಿ, ಗೋವಿಂದ ಸಣ್ಣಕ್ಕಿ, ಆರ್.ಕೆ ಪಾಟೀಲ ಹಾಗೂ ಸಮೂಹ ವ್ಯಾಪ್ತಿಯ ಶಿಕ್ಷಕ ಸಮೂಹ ಹಾಗೂ ಎಸ್.ಡಿ.ಎಂ.ಸಿ ಪದಾಧಿಕಾರಿಗಳು ಉಪಸ್ಥಿತರಿದ್ದರು.