ಹುಬ್ಬಳ್ಳಿ: ಜಾತಿಗಣತಿ (Caste census) ಮಾಡಲು ರಾಜ್ಯ ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ. ಈ ವಿಚಾರದಲ್ಲಿ ಸರ್ಕಾರ ಸುಮ್ಮನೆ ಗೊಂದಲ ಸೃಷ್ಟಿ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಹೇಳಿದ್ದಾರೆ.
ಈ ಬಗ್ಗೆ ಹುಬ್ಬಳ್ಳಿಯಲ್ಲಿ (Hubli) ಮಾತನಾಡಿದ ಅವರು, ಜಾತಿ ಜನಗಣತಿ ವಿಚಾರದಲ್ಲಿ ದೊಡ್ಡ ಪ್ರಮಾಣದ ಗೊಂದಲ ಸೃಷ್ಟಿಯಾಗುತ್ತಿದೆ.
ಇದು ಆಡಳಿತ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತೆ. ಜಾತಿ ಜನಗಣತಿ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವೇ ಇಲ್ಲ. ಜಾತಿಗಣತಿ ಮಾಡಬೇಕಿರುವುದು ಕೇಂದ್ರ ಸರ್ಕಾರ. ಕೇಂದ್ರ ಸರ್ಕಾರದ (Central Government) ಕೆಲಸವನ್ನು ನಾವು ಮಾಡುತ್ತೇವೆ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಜಾತಿ ಜನಗಣತಿ ವರದಿಯ ಮೂಲ ಪ್ರತಿ ಮಾಯವಾಗಿದೆ ಎಂದು ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷರೇ ಪತ್ರ ಬರೆದಿದ್ದಾರೆ. ಈ ವಿಚಾರದ ಬಗ್ಗೆ ಸರ್ಕಾರದಲ್ಲೇ ಸಹಮತವಿಲ್ಲ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಾಮನೂರು ಶಿವಶಂಕರಪ್ಪ ಮೊದಲಾದವರಿಂದ ಇದರ ಬಗ್ಗೆ ವಿರೋಧವಿದೆ. ಈ ಕುರಿತು ವರದಿ ಜಾರಿಯಾಗಬಾರದೆಂದು ವಿರೋಧ ಅವರಲ್ಲೇ ಇದೆ.
ಸರ್ಕಾರದಲ್ಲಿ ಗೊಂದಲ, ಭಿನ್ನಾಭಿಪ್ರಾಯ ಇರುವಾಗ ವರದಿ ಹೇಗೆ ಸಲ್ಲಿಸುತ್ತಾರೆ? ಕೆಲ ಶಾಸಕರನ್ನು ಎತ್ತಿಕಟ್ಟಿ ಸಿಎಂ ಸಿದ್ಧರಾಮಯ್ಯ (CM Siddaramaiah) ತಮ್ಮ ಪಾರುಪತ್ಯ ಮೆರೆಯುತ್ತಿದ್ದಾರೆ. ಜನರ ಹಿತದೃಷ್ಠಿಯಿಂದ ಸರ್ಕಾರ ಸರಿಯಾಗಿ ನಡೆಸಬೇಕು. ಆದರೆ ಸಿದ್ಧರಾಮಯ್ಯ 20 ಶಾಸಕರನ್ನ ಮೈಸೂರಿಗೆ (Mysore) ಕಳಿಸುವ ಪ್ರಯತ್ನ ಮಾಡಿದರು. ಸದ್ಯ ಹಲವು ಶಾಸಕರು ವಿದೇಶ ಪ್ರವಾಸದಲ್ಲಿದ್ದಾರೆ. ಈ ರೀತಿ ಗೊಂದಲ ಸೃಷ್ಟಿಸಿದ್ದಾರೆ. ಇದು ಸರಿಯಲ್ಲ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.