ಕಲಬುರಗಿ : ಮಾಜಿ ಮುಖ್ಯಮಂತ್ರಿಹೆಚ್ ಡಿಕುಮಾರಸ್ವಾಮಿ ಅವರು ಅಸ್ತಿತ್ವ ಉಳಿಸಿಕೊಳ್ಳಲು ದೆಹಲಿಗೆ ಹೋಗಿ ಬಿಜೆಪಿಯ ಎಲ್ಲಾ ಮುಖಂಡರಿಗೆ ಕಾಲಿಗೆ ಬಿದ್ದು ಬಂದಿದ್ದಾರೆ ಎಂದು ಚಿಂಚೋಳಿ ಜನಸ್ಪಂದನ ಕಾರ್ಯಕ್ರಮದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಟೀಕೆ ಮಾಡಿದ್ದಾರೆ.
ರಾಜ್ಯದ ಹಿತದೃಷ್ಠಿಯಿಂದಲ್ಲ, ಪ್ರಧಾನಿ ಬಳಿ ಅವರ ಅಸ್ತಿತ್ವ ಉಳಿಸಿಕೊಳ್ಳಲು ಹೋಗಿದ್ದಾರಾ? ಅಥವಾ ಅವರು ಕಾವೇರಿ ವಿಚಾರ ಚರ್ಚೆ ಮಾಡಿದ್ರಾ? ಎಂದು ಪ್ರಶ್ನಿಸಿದರು.
ಹೋಮ್ ಮಿನಿಸ್ಟರ್ ಹತ್ತಿರ ಹೋದ್ರು. ಜೆ ಪಿ ನಡ್ಡಾ ಅವರ ಹತ್ತಿರ ಹೋದ್ರು. ಅಲ್ಲಿ ಜೆಡಿಎಸ್ ಬಗ್ಗೆ ಚರ್ಚೆ ಆಯ್ತ? ಅಥವಾ ಕರ್ನಾಟಕದ ಜನರ ಭವಿಷ್ಯದ ಬಗ್ಗೆಯೂ ಚರ್ಚೆ ಆಯ್ತ?. ಈಗ ಅವರೇ ಇದ್ದರಲ್ಲ ಅಧಿಕಾರದಲ್ಲಿ, ಡಬಲ್ ಇಂಜಿನ್ ಹೋಗಿ ತ್ರಿಬಲ್ ಇಂಜಿನ್ ಆಯ್ತಲ್ಲ? ಎಂದು ವಾಗ್ದಾಳಿ ನಡೆಸಿದರು.
ನೀರಿನ ವಿಚಾರದಲ್ಲಿ ದಯವಿಟ್ಟು ಯಾರು ರಾಜಕೀಯ ಮಾಡೋದಕ್ಕೆ ಹೋಗಬೇಡಿ. ರೈತರ ಪರವಾಗಿ, ಕನ್ನಡಿಗರ ಪರವಾಗಿ ಈ ಸರ್ಕಾರ ಕೆಲಸ ಮಾಡುತ್ತಿದೆ. ಅದನ್ನು ನಾವು ಈಗಾಗಲೇ ದೃಢಪಡಿಸಿದ್ದೇವೆ. ಅನ್ಯಾಯ ಆಗ್ತಿದೆ ಅಂತಾ ಮೇಕೆದಾಟು ಯೋಜನೆ ಮಾಡ್ತಿದ್ದೇವೆ. ರೈತರಿಗಾಗಿಯೇ ಪಾದಯಾತ್ರೆ ಮಾಡಿರೋದು, ನಮ್ಮ ಸಲುವಾಗಿ ಅಲ್ಲ ಎಂದು ಸಚಿವ ಖರ್ಗೆ ಹೇಳಿದರು.
ನೀರು ಬಿಡದೆ ಇದ್ರು ಕೋರ್ಟ್ ಆದೇಶ ಉಲ್ಲಂಘನೆ ಆಗಲ್ಲ ಅನ್ನೋ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ನಾವು ನೆಲದ ಕಾನೂನು ಪಾಲನೆ ಮಾಡಬೇಕಲ್ವಾ? ಬಿಜೆಪಿಯವರು ಅಧಿಕಾರದಲ್ಲಿದ್ದಾಗ ನೀರು ಬಿಟ್ಟಿರಲಿಲ್ವಾ? ಎಂದು ಪ್ರಶ್ನಿಸಿದರು. ಅನ್ಯಾಯವಾಗ್ತಿದೆ ಅಂತಲೇ ನಾವು ಮೇಕೆದಾಟು ಯೋಜನೆ ಮಾಡ್ತಿರೋದು. ಮೇಕೆದಾಟು ಯೋಜನೆ ಬಗ್ಗೆ ಸುಪ್ರೀಂ ಕೋರ್ಟ್ ಆದೇಶ ಏನಿದೆ?. ನಿಮ್ಮ ಪಾಲಿನ ನೀರು ಸಿಕ್ಕರೆ ನೀವು ಮೇಕೆದಾಟು ಯೋಜನೆ ಬಗ್ಗೆ ತಕರಾರು ಎತ್ತುವಂತಿಲ್ಲ ಎಂದು ಬಹಳ ಸ್ಪಷ್ಟವಾಗಿ ಮೊನ್ನೆ ಹೇಳಿಕೆ ನೀಡಿದ್ದಾರೆ.