ಬೆಂಗಳೂರು : ಸನಾತನ ಧರ್ಮದ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ನಾನು ಮಾಡಿದ ಟ್ವೀಟ್ನಲ್ಲಿ ಏನೂ ತಪ್ಪಿಲ್ಲ, ಸಂವಿಧಾನವೇ ನನ್ನ ಧರ್ಮ ಅಂತಾ ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ಸಂವಿಧಾನದಿಂದ ಸ್ವಾಭಿಮಾನದ ಬದುಕು ಸಿಗುತ್ತದೆ. ಸಂವಿಧಾನದಿಂದ ಏನೂ ಇಲ್ಲ ಅಂತ ಬಿಜೆಪಿ ಪಕ್ಷದವರು ಅವರು ಹೇಳಲಿ. ಮೊಸರಲ್ಲಿ ಕಲ್ಲು ಹುಡುಕುವುದು ಬೇಡ” ಎಂದು ತಿರುಗೇಟು ನೀಡಿದರು.
ನಿಮ್ಮ ಆಚರಣೆ ವಿರುದ್ಧ ನಾನಿಲ್ಲ ಅಂದ್ರೆ ನನ್ನ ಆಚರಣೆ ವಿರುದ್ಧ ಯಾಕೆ ಇದ್ದೀರಾ?. ಮಾನವ ಕುಲ ಮುಂದುವರೆಯಬೇಕು ಅಂದರೆ ಕುತೂಹಲ ಮುಖ್ಯ. ಏನೇನು ಪ್ರಶ್ನೆ ಇದೆ, ಅದಕ್ಕೆ ಏನೇನು ಉತ್ತರ ಇದೆ, ಕೊಡಿ ನೀವು ಎಂದು ಬಿಜೆಪಿ ನಾಯಕರನ್ನು ಪ್ರಶ್ನಿಸಿದರು. ಬಳಿಕ, ಸಂವಿಧಾನದ ಬಗ್ಗೆ ನಂಬಿಕೆ ಇದೆ. ನಾನು ಉದಯನಿಧಿ ಸ್ಟಾಲಿನ್ ಅಥವಾ ಯಾರಿಗ್ಯಾಕೆ ಸಮರ್ಥನೆ ಮಾಡಬೇಕು. ಎಫ್ ಆರ್ ಐ ಎಲ್ಲಿಯಾದರು ಹಾಕಲಿ ಎಂದರು.
ರಿಪಬ್ಲಿಕ್ ಆಫ್ ಭಾರತ್ ಹೆಸರು ನಾಮಕರಣ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, “ಇವರು ವಾಟ್ಸ್ಆಯಪ್ ವಿವಿಯಲ್ಲಿ ಬೆಳೆದು ಬಂದವರು. ಇತಿಹಾಸ ತಿಳಿದುಕೊಂಡು ಬಂದಿಲ್ಲ. ಮೊದಲು ಭಾರತ, ಇಂಡಿಯಾ ಹೆಸರು ಹೇಗೆ ಬಂತು ಅಂತ ತಿಳಿದುಕೊಳ್ಳಲಿ. ಮೊದಲು ರಸ್ತೆ ಹೆಸರು ಚೇಂಜ್ ಮಾಡುತ್ತಾ ಇದ್ರು, ಈಗ ದೇಶದ ಹೆಸರು ಬದಲಾವಣೆ ಮಾಡ್ತಾ ಇದ್ದಾರೆ. ದೇಶದ ಹಣೆ ಬರಹ ಚೇಂಜ್ ಮಾಡಿ. ಹಸಿವಿನಿಂದ ಎಷ್ಟು ಜನ ಸಾಯುತ್ತಿದ್ದಾರೆ. ಮೇಕ್ ಇನ್ ಇಂಡಿಯಾ, ಹಣಕಾಸಿನ ಪರಿಸ್ಥಿತಿ ಬಗ್ಗೆ ಶ್ವೇತ ಪತ್ರ ಹೊರಡಿಸಲಿ” ಎಂದು ಒತ್ತಾಯಿಸಿದರು.