ಬೆಂಗಳೂರು : ರಾಜ್ಯದಲ್ಲಿ ನೋಂದಣಿ ಮಾಡದೆ ಅನಧಿಕೃತವಾಗಿ ಶಾಲೆ ನಡೆಸುತ್ತಿರುವುದು, ತರಗತಿಗಳನ್ನು ನಡೆಸುತ್ತಿರುವುದು, ಅನಧಿಕೃತ ಪಠ್ಯಕ್ರಮ ಬೋಧನೆ, ಕೇಂದ್ರ ಪಠ್ಯಕ್ರಮಕ್ಕೆ ಸಂಯೋಜಿಸಿದ ನಂತರವೂ ರಾಜ್ಯ ಪಠ್ಯಕ್ರಮದಲ್ಲಿ ಶಾಲೆ ನಡೆಸುತ್ತಿರುವುದನ್ನು ನಿಯಂತ್ರಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಈ ಸಂಬಂಧ ಆಗಸ್ಟ್ 14ರ ವರೆಗೆ ಅಧಿಕಾರಿಗಳಿಗೆ ಗಡುವು ನೀಡಲಾಗಿದ್ದು, ಆಗಸ್ಟ್ 16ರೊಳಗೆ ವರದಿಯನ್ನು ಸಲ್ಲಿಕೆ ಮಾಡುವಂತೆ ಸೂಚಿಸಲಾಗಿದೆ. ವರದಿ ಸಲ್ಲಿಕೆ ಮಾಡದೇ ಇದ್ದಲ್ಲಿ ಸಂಬಂಧಪಟ್ಟ ಜಿಲ್ಲಾ ಉಪನಿರ್ದೇಶಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ರಾಜ್ಯದಲ್ಲಿನ ಕೆಲವು ಖಾಸಗಿ ಶಾಲಾ ಆಡಳಿತ ಮಂಡಳಿಗಳು ಕರ್ನಾಟಕ ಶಿಕ್ಷಣ ಕಾಯ್ದೆ 1983 ಸೆಕ್ಷನ್ 30, 31ರ ಪ್ರಕಾರ ಇಲಾಖಾ ವತಿಯಿಂದ ಯಾವುದೇ ನೋಂದಣಿಯನ್ನು ಪಡೆಯದೆ ಕಾರ್ಯ ನಿರ್ವಹಿಸುತ್ತಿವೆ. ಆಯಾ ಜಿಲ್ಲೆಗಳಲ್ಲಿ ನೋಂದಣಿಯನ್ನು ಪಡೆಯದೆ ಅನಧಿಕೃತವಾಗಿ ಶಾಲೆ ನಡೆಸುತ್ತಿರುವುದು, ಕೇಂದ್ರ ಪಠ್ಯಕ್ರಮಕ್ಕೆ ಸಂಯೋಜಿಸಿದ ನಂತರವೂ ರಾಜ್ಯ ಪಠ್ಯಕ್ರಮದಲ್ಲಿ ಶಾಲೆ ನಡೆಸುತ್ತಿರುವುದು ನಿಯಮಬಾಹಿರವಾಗಿದೆ.
ಈ ಸಂಬಂಧ ಶಾಲಾ ಆಡಳಿತ ಮಂಡಳಿಗಳಿಗೆ 45 ದಿನಗಳ ಸಮಯಾವಕಾಶ ನೀಡಿ 2023-24ನೇ ಶೈಕ್ಷಣಿಕ ಸಾಲಿನ ದಾಖಲಾತಿ ಪ್ರಾರಂಭವಾಗುವ ಮುನ್ನವೇ ತಕ್ಷಣ ನಿಯಮಾನುಸಾರ ಕ್ರಮ ವಹಿಸುವಂತೆ ಮತ್ತು ನಂತರದಲ್ಲಿ ಹಳೆಯ ಪದ್ಧತಿಯಲ್ಲೇ ಶಿಕ್ಷಣ ಮುಂದುವರೆಸಿದ್ದಲ್ಲಿ ಅಂತಹ ಶಾಲೆಗಳಿಗೆ ಪೋಷಕರು ಮಕ್ಕಳನ್ನು ದಾಖಲಿಸದಂತೆ ಜಾಗೃತಿ ಮೂಡಿಸಲು ಸೂಚಿಸಲಾಗಿತ್ತು. ಆದರೂ ರಾಜ್ಯದಲ್ಲಿ ಅನಧಿಕೃತ ಶಾಲೆಗಳಿಗೆ ಸಂಬಂಧಪಟ್ಟಂತೆ ಮಾಧ್ಯಮಗಳಲ್ಲಿ 1300 ಅನಧಿಕೃತ ಶಾಲೆಗಳಿದ್ದರೂ ಇಲಾಖೆ ಕ್ರಮ ವಹಿಸಿಲ್ಲ ಎನ್ನುವ ವರದಿ ಬಂದಿದೆ. ಹಾಗಾಗಿ ಕೂಡಲೇ ಆಯಾ ಜಿಲ್ಲೆಗಳಲ್ಲಿ ಸರ್ಕಾರದ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.