ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿಯಲ್ಲಿ ಮತ್ತೊಂದು ಅವಘಡ ಸಂಭವಿಸಿದ್ದು, ವಿದ್ಯುತ್ ಫೀಡರ್ ಪಿಲ್ಲರ್ ತಗಲಿ ಹಸು-ಕರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಇಂದು ಬೆಳಗಿನ ಜಾವ ಅಕ್ಕಿಹೊಂಡದ ಬಳಿ ನಡೆದಿದೆ. ಸ್ಮಾರ್ಟ್ ಸಿಟಿ ಯೋಜನೆಗಳಿಂದಾಗಿ ಒಂದಲ್ಲಾ ಒಂದು ಯಡವಟ್ಟುಗಳು ಆಗುತ್ತಿವೆ ಎಂದು ಅಲ್ಲಿನ ಸಾರ್ವಜನಿಕರು ಆರೋಪಿಸಿದ್ದಾರೆ.
ಅದರಂತೆ ಅಕ್ಕಿಹೊಂಡದಲ್ಲಿ ಕೂಡಾ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಸುತ್ತಿರುವವರ ನಿರ್ಲಕ್ಷ್ಯದಿಂದಾಗಿ ಈ ಅವಘಡ ಸಂಭವಿಸಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲ ದಿನಗಳಿಂದ ಇಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಯ ಭಾಗವಾಗಿ ಅಂಡರ್ ಗ್ರೌಂಡ್ ವಿದ್ಯುತ್ ಕೇಬಲ್ ಅಳವಡಿಕೆ ಮಾಡಲಾಗಿತ್ತು. ವಿದ್ಯುತ್ ನಿರ್ವಹಣೆಗೆ ಅಳವಡಿಸಲಾಗಿದ್ದ ವಿದ್ಯುತ್ ಫೀಡರ್ ಪಿಲ್ಲರ್ ನಿರ್ವಹಣೆಗೆ ಅಳವಡಿಸಿದ್ದ ಸ್ಥಳದಲ್ಲಿ ವಿದ್ಯುತ್ ಫೀಡರ್ ಪಿಲ್ಲರ್ ಶಾರ್ಟ್ ಆಗಿ ವಿದ್ಯುತ್ ತಗುಲುತ್ತಿದೆ. ಮಳೆಯಿಂದ ನೆಲ ತೇವಾಂಶಗೊಂಡಿದ್ದರಿಂದ ಆ ಜಾಗದಲ್ಲಿ ಆಸರೆ ಪಡೆದಿದ್ದ ಹಸು ಮತ್ತು ಕರು ಆಕಸ್ಮಿಕವಾಗಿ ವಿದ್ಯುತ್ ತಗುಲಿ ಸಾವಿಗೀಡಾಗಿವೆ.