ಬೆಂಗಳೂರು : ರಾಜ್ಯದಲ್ಲಿ ಅಕ್ರಮವಾಗಿ ಒತ್ತುವರಿಯಾಗಿರುವ ಮತ್ತು ಕಬಳಿಕೆಯಾಗಿರುವ ಕಂದಾಯ ಭೂಮಿಯನ್ನು ವಾಪಸ್ ಪಡೆದುಕೊಳ್ಳಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ.
ಅಕ್ರಮಕ್ಕೆ ಸಹಕರಿಸುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ವಹಿಸಲಿದ್ದು, ವ್ಯವಸ್ಥೆ ಬಿಗಿ ಮಾಡಲಿದ್ದೇವೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಇಂದು ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಟಿಎ ಶರವಣ ಪ್ರಶ್ನೆಗೆ ಉತ್ತರಿಸಿದ ಸಚಿವ ಕೃಷ್ಣ ಬೈರೇಗೌಡ, ಕಂದಾಯ ಭೂಮಿ ಕಬಳಿಕೆದಾರರು, ಒತ್ತುವರಿದಾರರು ಯಾವ ಸರ್ಕಾರ ಬಂದರೂ ಹೋದರೂ ಅಡ್ಡಿಯಿಲ್ಲದಂತಿದ್ದಾರೆ. ಅಧಿಕಾರಿಗಳ ಸಹಕಾರವಿಲ್ಲದೆ ಈ ರೀತಿ ಆಕ್ರಮ ನಡೆಯಲ್ಲ. ಇರುವ ಕಾನೂನನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿದರೇ ನಿಯಂತ್ರಣ ಮಾಡಲು ಸಾಧ್ಯ. ಆದರೆ ಇದಾಗುತ್ತಿಲ್ಲ ಎಂದರು.
ಕಳೆದ ಸರ್ಕಾರ ಇದ್ದಾಗ ರೈತರು ಸಾಗುವಳಿ ಮಾಡುತ್ತಿರುವ ಜಾಗ ಕಂದಾಯ ಭೂಮಿ ಒತ್ತುವರಿಯಿಂದ ಹೊರಗೆ ತರುವ ಕೆಲಸ ಮಾಡಿದೆ. ಉಳಿದ ಒತ್ತುವರಿ ಜಾಗ ವಾಪಸ್ ಪಡೆಯಲು ನಾವು ಕ್ರಮ ವಹಿಸಲಿದ್ದೇವೆ. ಅಕ್ರಮಕ್ಕೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ಕ್ರಮ ವಹಿಸುತ್ತಿದ್ದೇವೆ. ಈ ಸಂಬಂಧ ಕೆ. ಆರ್ ಪುರ ತಹಶೀಲ್ದಾರ್ ಅಮಾನತ್ತು ಮಾಡಿದ್ದೇವೆ. ಈಗಾಗಲೇ ಅಧಿಕಾರಿಗಳಿಗೆ ಪತ್ರ ಕಳಿಸಿದ್ದು, ಒತ್ತವರಿ ಕುರಿತು ವರದಿಗೆ ಸೂಚನೆ ನೀಡಿದ್ದೇನೆ. ಇಂತಹ ಆಕ್ರಮಗಳು ನಡೆಯದಂತೆ ಬಿಗಿ ವ್ಯವಸ್ಥೆ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಸರ್ಕಾರ ಈ ನಿಟ್ಟಿನಲ್ಲಿ ಎಲ್ಲ ಪ್ರಯತ್ನ ನಡೆಸಲಿದೆ ಎಂದರು.