ನವದೆಹಲಿ: ಮುಂಬರುವ ಪ್ರಮುಖ ರಾಜ್ಯ ಚುನಾವಣೆಗಳು ಮತ್ತು 2024ರ ಲೋಕಸಭೆ ಚುನಾವಣೆಗೆ ಆಡಳಿತಾರೂಢ ಬಿಜೆಪಿ ಸಜ್ಜಾಗುತ್ತಿದೆ.
ಇದಕ್ಕೂ ಮುನ್ನ ಪಕ್ಷದ ಸಂಘಟನೆಯಲ್ಲಿ ಸಂಭವನೀಯ ಬದಲಾವಣೆಗಳು ತರುವ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಪಕ್ಷದ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸೇರಿ ಹಿರಿಯ ನಾಯಕರು ಸರಣಿ ಸಭೆಗಳನ್ನು ನಡೆಸಿದ್ದಾರೆ ಎಂದು ವರದಿಯಾಗಿದೆ.
ಈ ಮೂವರು ಪ್ರಮುಖ ನಾಯಕರು ಸಂಘ ಪರಿವಾರದ ಸದಸ್ಯರೊಂದಿಗೆ ಮಹತ್ವದ ಸಭೆಗಳನ್ನೂ ನಡೆಸಿದ್ದಾರೆ. ಜೊತೆಗೆ ವಿಶ್ವ ಹಿಂದೂ ಪರಿಷತ್, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಬಜರಂಗದಳ, ಸಂಘ ಪರಿವಾರಕ್ಕೆ ಸಂಬಂಧಿಸಿದ ಎಲ್ಲ ಘಟಕಗಳು ಹಾಗೂ ರೈತರು, ಕಾರ್ಮಿಕರು ಮತ್ತು ಅರಣ್ಯವಾಸಿಗಳಿಗೆ ಸಂಬಂಧಿಸಿದ ಸಂಘಟನೆಗಳು ದೇಶದ ವಿವಿಧ ಭಾಗಗಳಲ್ಲಿ ನಿರಂತರವಾಗಿ ಸಭೆಗಳನ್ನು ನಡೆಸುತ್ತಿವೆ.
ಮತ್ತೊಂದೆಡೆ, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್)ದ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಸಂಘದ ಹಿರಿಯ ನಾಯಕರು ನಿರಂತರವಾಗಿ ದೇಶದ ವಿವಿಧ ರಾಜ್ಯಗಳಿಗೆ ಭೇಟಿ ನೀಡಿ, ಸಭೆಗಳನ್ನು ನಡೆಸುತ್ತಿದ್ದಾರೆ. ಇದೇ ವೇಳೆ ಜನರೊಂದಿಗೆ ಸಂವಾದ ನಡೆಸುತ್ತಿದ್ದಾರೆ. ಇದರ ನಡುವೆ ಮೋಹನ್ ಭಾಗವತ್ ಜುಲೈನಲ್ಲಿ ಉತ್ತರ ಪ್ರದೇಶಕ್ಕೆ ಐದು ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ.
ಯುವ ನಾಯಕರ ಪಡೆ ಕಟ್ಟಲು ಸಿದ್ಧತೆ: ಈ ಎಲ್ಲ ಸಭೆಗಳು ಮತ್ತು ಪ್ರವಾಸಗಳ ಉದ್ದೇಶವೆಂದರೆ ಚುನಾವಣೆಗಳಿಗೆ ತಯಾರಿ ಮಾಡುವುದೇ ಆಗಿದೆ. ಆದರೆ, ಈ ಎಲ್ಲ ಕಸರತ್ತುಗಳ ಪ್ರಮುಖ ಉದ್ದೇಶವೆಂದರೆ ಹೊಸ ಬಿಜೆಪಿಯನ್ನು ರಚಿಸುವುದು. ಹೊಸ ಬಿಜೆಪಿಯ ಅರ್ಥವೇನೆಂದರೆ, ಭವಿಷ್ಯದಲ್ಲಿ ಪಕ್ಷವನ್ನು ನಿಭಾಯಿಸುವ ಮತ್ತು ಮುನ್ನಡೆಸುವ ನಾಯಕರು, ವಿಶೇಷವಾಗಿ ಯುವ ನಾಯಕರ ಪಡೆಯನ್ನು ಸಿದ್ಧಪಡಿಸುವುದು ಎಂದು ಮೂಲಗಳು ತಿಳಿಸಿವೆ.