ಬೆಂಗಳೂರು ಗ್ರಾಮಾಂತರ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮುತ್ಯಾಲಮ್ಮ ಜಾತ್ರೆಯಲ್ಲಿ ಏರ್ ಬಲೂನ್ ಜಂಪಿಂಗ್ ಆಟವಾಡುತ್ತಿದ್ದ ಬಾಲಕ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.
ಮೃತ ಬಾಲಕ ದೊಡ್ಡಬಳ್ಳಾಪುರದ ಶಾಂತಿನಗರದ ನಿವಾಸಿ ಮಂಜುನಾಥ್ ಎಂಬುವರ ಪುತ್ರ 9 ವರ್ಷದ ಶ್ರೇಯಸ್ ಎಂದು ತಿಳಿದುಬಂದಿದೆ.
ಶ್ರೇಯಸ್ ತನ್ನ ತಾಯಿ ಜೊತೆಗೆ ಜಾತ್ರೆಗೆ ಹೋಗಿದ್ದನು ಎನ್ನಲಾಗಿದೆ. ಜಾತ್ರೆಯಲ್ಲಿ ಮಕ್ಕಳ ಮನೋರಂಜನೆಗಾಗಿ ಹಾಕಲಾಗಿರುವ ವಿವಿಧ ಆಟಗಳಲ್ಲಿ ತೊಡಗಿದ್ದ. ಏರ್ ಬಲೂನ್ ಜಂಪಿಂಗ್ ಮಾಡುತ್ತಿದ್ದಾಗ ಶ್ರೇಯಸ್ಗೆ ಹೃದಯಾಘಾತವಾಗಿದೆ.
ನಿತ್ರಾಣಗೊಂಡು ಅಲ್ಲಿಯೇ ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.ಗಾಬರಿಗೊಂಡ ತಾಯಿ ಮತ್ತು ಜನರು ತಕ್ಷಣವೇ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಆತ ಮೃತಪಟ್ಟಿದ್ದನು ಎಂದು ವೈದ್ಯರು ತಿಳಿಸಿದ್ದಾರೆ.
ಬಾಲಕನ ಸಾವಿನಿಂದಾಗಿ ಜಾತ್ರೆಯ ಆಯೋಜಕರ ಮೇಲೆ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.