Home / ರಾಜಕೀಯ / ಬೆಳಗಾವಿಯಲ್ಲಿ ಸುರಿದ ಬಿರುಗಾಳಿ ಸಹಿತ ಮಳೆಗೆ ಧರೆಗುರುಳಿದ 47 ವಿದ್ಯುತ್ ಕಂಬಗಳು

ಬೆಳಗಾವಿಯಲ್ಲಿ ಸುರಿದ ಬಿರುಗಾಳಿ ಸಹಿತ ಮಳೆಗೆ ಧರೆಗುರುಳಿದ 47 ವಿದ್ಯುತ್ ಕಂಬಗಳು

Spread the love

ಬೆಳಗಾವಿ : ಕಳೆದ ಎರಡು ದಿನಗಳಿಂದ ಸುರಿದ ಮಳೆ ರಾಜ್ಯದೆಲ್ಲೆಡೆ ಸಾಕಷ್ಟು ಹಾನಿಯುಂಟು ಮಾಡಿದೆ. ಅದರಂತೆ ಬೆಳಗಾವಿಯಲ್ಲಿ ಸೋಮವಾರ ಮತ್ತು ಮಂಗಳವಾರ ನಗರದಲ್ಲಿ ಬಿರುಗಾಳಿ ಸಹಿತ ಅಬ್ಬರಿಸಿದ ಮಳೆ ಹಲವು ಅವಾಂತರ ಸೃಷ್ಟಿಸಿದೆ.

ಅನೇಕ ಕಡೆಗಳಲ್ಲಿ ಮರಗಳು ಬಿದ್ದಿದ್ದರಿಂದ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಇದರ ಪರಿಣಾಮ‌ ನಗರದ ಬಹಳಷ್ಟು ಪ್ರದೇಶಗಳಲ್ಲಿನ ವಿದ್ಯುತ್ ವ್ಯತ್ಯಯದಿಂದ ಜನರು ಪರದಾಡುವಂತಾಯಿತು.

ವಿಶ್ವೇಶ್ವರಯ್ಯ ನಗರ, ಹನುಮಾನ್​ ನಗರ,‌ ಸದಾಶಿವ ನಗರ, ರಾಮತೀರ್ಥ ನಗರ, ಸರ್ಕಾರಿ ಸರ್ದಾರ್ಸ್‌ ಪ್ರೌಢಶಾಲೆ ಮುಂಭಾಗದ ರಸ್ತೆ, ಯಳ್ಳೂರ ರಸ್ತೆ, ಡಿ.ಸಿ ಕಚೇರಿ ಬಳಿ, ಶಹಾಪುರದ ಸರಾಫ್‌ ಗಲ್ಲಿ, ಗಾಂಧಿ ನಗರ ಸೇರಿದಂತೆ ಹಲವು ಕಡೆ ವಿದ್ಯುತ್‌ ಕಂಬಗಳು ಮತ್ತು ವಿದ್ಯುತ್‌ ಪರಿವರ್ತಕಗಳಿಗೆ ಹಾನಿಯಾಗಿದೆ.

ರಭಸದ ಗಾಳಿಗೆ 47 ವಿದ್ಯುತ್‌ ಕಂಬಗಳು, 8 ವಿದ್ಯುತ್‌ ಪರಿವರ್ತಕಗಳಿಗೆ ಹಾನಿಯಾಗಿದ್ದು, ಹೆಸ್ಕಾಂಗೆ ಬರೋಬ್ಬರಿ 29 ಲಕ್ಷ ರೂ. ನಷ್ಟವಾಗಿದೆ. ಮೇ 22 ಸೋಮವಾರ ತಡರಾತ್ರಿಯಿಂದಲೇ ನಡೆಯುತ್ತಿರುವ ದುರಸ್ತಿ ಕಾಮಗಾರಿಗಳು ಇಂದು (ಬುಧವಾರ) ಮಧ್ಯಾಹ್ನದವರೆಗೂ ಮುಂದುವರಿದಿದ್ದವು. ಈ ಸಂಬಂಧ ಈಟಿವಿ ಭಾರತ ಜೊತೆಗೆ ಮಾತನಾಡಿದ ಸ್ಥಳೀಯ ಗ್ಯಾರೇಜ್​ವೊಂದರ ಮಾಲೀಕ ಆಸೀಫ್‌ ರೋಟಿವಾಲೆ, ಸರ್ಕಾರಿ ಸರ್ದಾರ್ಸ್‌ ಪ್ರೌಢಶಾಲೆ ಮುಂಭಾಗದ ರಸ್ತೆಯಲ್ಲಿ ನಮ್ಮ ಹಲವು ಅಂಗಡಿ ಮುಂಗಟ್ಟುಗಳಿವೆ. ಸೋಮವಾರ ರಾತ್ರಿ ಬಿರುಗಾಳಿ‌ ಸಹಿತವಾಗಿ ಭಾರಿ‌ ಮಳೆ ಸುರಿದು, ಮರ ಬಿದ್ದಿದ್ದರಿಂದ ವಿದ್ಯುತ್ ಕಂಬಕ್ಕೆ ಹಾನಿಯಾಗಿತ್ತು. ವಿದ್ಯುತ್‌ ತಂತಿಗಳು ಹರಿದುಬಿದ್ದಿದ್ದವು.

ಹೀಗಾಗಿ ಮೂರು ದಿನಗಳಿಂದ ವಿದ್ಯುತ್​ ಇಲ್ಲದೆ ಸಾಕಷ್ಟು ಕಷ್ಟ ಅನುಭವಿಸಿದ್ದೇವೆ. ಇದೀಗ ಹೆಸ್ಕಾಂ ಸಿಬ್ಬಂದಿ ಎರಡು ದಿನಗಳಿಂದ ದುರಸ್ತಿ ಕಾಮಗಾರಿ ಕೈಗೊಂಡಿದ್ದರಿಂದ ವಿದ್ಯುತ್‌ ಸಂಪರ್ಕ ಆರಂಭಗೊಂಡಿದೆ. ಪ್ರತಿ ಬಾರಿ ಮಳೆಗಾಲದಲ್ಲೂ ಇಂತಹ ಸಮಸ್ಯೆ ನಮ್ಮನ್ನು ಕಾಡುತ್ತಲೇ ಇದೆ. ಹಾಗಾಗಿ ಅಪಾಯಕಾರಿ ಹಂತದಲ್ಲಿರುವ ಮರಗಳನ್ನು ಅರಣ್ಯ ಇಲಾಖೆಯವರು ಕತ್ತರಿಸಬೇಕು. ವಿದ್ಯುತ್‌ ಸೌಕರ್ಯಕ್ಕೆ ಯಾವುದೇ ಹಾನಿಯಾಗದಂತೆ ಸಹಕರಿಸಬೇಕು ಎಂದು ಮನವಿ ಮಾಡಿದರು. ‌

ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರತಿಕ್ರಿಯೆ : ಇದೇ ವೇಳೆ ಬೆಳಗಾವಿ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಭಾನು ಮಾತನಾಡಿ, ನಮ್ಮ ಇಲಾಖೆ ಸಿಬ್ಬಂದಿ ವಿವಿಧ ಬಡಾವಣೆಗಳಿಗೆ ಹೋಗಿ, ಮಳೆಗಾಲದಲ್ಲಿ ಅಪಾಯ ತಂದೊಡ್ಡಬಲ್ಲ ಮರಗಳನ್ನು ಪರಿಶೀಲಿಸುತ್ತಿದ್ದಾರೆ. ಯಾವುದೇ ಪ್ರದೇಶದಲ್ಲಿ ಇಂತಹ ಮರಗಳಿದ್ದರೆ ಸಾರ್ವಜನಿಕರು ನಮಗೆ ಅರ್ಜಿ ಸಲ್ಲಿಸಬೇಕು. ತ್ವರಿತವಾಗಿ ಅವುಗಳನ್ನು ಕತ್ತರಿಸಿ, ಯಾವುದೇ ಅನಾಹುತವಾಗದಂತೆ ಕ್ರಮ ಕೈಗೊಳ್ಳಲು ನಾವು ಸಿದ್ಧರಿದ್ದೇವೆ ಎಂದು ತಿಳಿಸಿದರು.

ಹೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್‌ ಹೇಳಿದ್ದೇನು : ಬಳಿಕ ಹೆಸ್ಕಾಂ ಬೆಳಗಾವಿ ವಲಯದ ಕಾರ್ಯನಿರ್ವಾಹಕ ಎಂಜಿನಿಯರ್‌ ವಿನೋದ ಕರೂರ ಈ ಕುರಿತು ಪ್ರತಿಕ್ರಿಯಿಸಿ, ಮಳೆ, ಗಾಳಿಯಿಂದಾಗಿ ಹಾನಿಗೀಡಾದ ವಿದ್ಯುತ್‌ ಪರಿಕರಗಳನ್ನು ದುರಸ್ತಿ ಮಾಡಿದ್ದೇವೆ. ಅಪಾಯಕಾರಿ ಹಂತದಲ್ಲಿರುವ ವಿದ್ಯುತ್‌ ಕಂಬಗಳನ್ನು ತೆರವುಗೊಳಿಸಿದ್ದೇವೆ. ಮಳೆಯಿಂದಾಗಿ ಯಾವುದೇ ಅನಾಹುತ ಸಂಭವಿಸಿದರೂ ತ್ವರಿತವಾಗಿ ಕಾರ್ಯಾಚರಣೆ ಕೈಗೊಳ್ಳಲು ನಮ್ಮ ಇಲಾಖೆ ಸನ್ನದ್ಧಗೊಂಡಿದೆ. ಇದಕ್ಕಾಗಿ ಅಗತ್ಯ ಸಿಬ್ಬಂದಿ ನಿಯೋಜಿಸಿದ್ದು, ನಾವೆಲ್ಲಾ ಕಾರ್ಯೋನ್ಮುಖರಾಗಿದ್ದೇವೆ ಎಂದರು.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ