ಶಿರಸಿ: ಮಲೆನಾಡು ಹಾಗೂ ಕರಾವಳಿಯಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ಕಾಳ್ಗಿಚ್ಚು ನಿಯಂತ್ರಿಸಲು ಜಿಲ್ಲೆಯ ಪರಿಸರ ಹಾಗೂ ಜೀವಶಾಸ್ತ್ರ ತಜ್ಞರು ಕೆಲವು ನಿಯಂತ್ರಣಾ ಕ್ರಮಗಳ ಬಗ್ಗೆ ಮುಖ್ಯಮಂತ್ರಿಗೆ ಪತ್ರ ಬರೆದಿದ್ದು, ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಪರಿಸರ ತಜ್ಞರಾದ ಅನಂತ ಹೆಗಡೆ ಅಶೀಸರ, ಪ್ರೊ. ಬಿ.ಎಂ.ಕುಮಾರಸ್ವಾಮಿ, ಬಿ.ಎಚ್.ರಾಘವೇಂದ್ರ, ವೆಂಕಟೇಶ ವರದಾಮೂಲ, ಡಾ. ಕೇಶವ ಎಚ್. ಕೊರ್ಸೆ, ನಾರಾಯಣ ಗಡಿಕೈ, ಡಾ. ಪ್ರಕಾಶ ಮೇಸ್ತ, ಡಾ. ಮಹಾಬಲೇಶ್ವರ ಸಾಯಿಮನೆ, ಗಣಪತಿ ಬಿಸಲಕೊಪ್ಪ ಅವರನ್ನು ಒಳಗೊಂಡ ತಂಡವು 6 ಅಂಶ ಒಳಗೊಂಡ ಪತ್ರ ರವಾನಿಸಿದೆ.
‘ಪ್ರಸಕ್ತ ವರ್ಷ ಕಾಡಿನ ಬೆಂಕಿ ತೀವ್ರವಾಗಿ ತಲೆದೋರಿದೆ. ಈ ಹಿನ್ನೆಲೆಯಲ್ಲಿ ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ನೇತೃತ್ವದ ಜಿಲ್ಲಾ ಮಟ್ಟದ ಅವಘಡ ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಕ್ರಿಯಾಶೀಲಗೊಳಿಸಬೇಕು. ಪ್ರತಿಯೊಂದು ಜಿಲ್ಲೆಯ ಪ್ರತಿ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯನ್ಳು ಅವರ ಅಧಿಕಾರ ವ್ಯಾಪ್ತಿ ಪ್ರದೇಶದ ಬೆಂಕಿ ನಿಯಂತ್ರಣ ಕಾರ್ಯದ ನೋಡಲ್ ಅಧಿಕಾರಿಯನ್ನಾಗಿ ನಿಯೋಜಿಸಬೇಕು.
ಬೆಂಕಿ ಆರಿಸುವವರಿಗೆ ಸೂಕ್ತ ಸುರಕ್ಷತಾ ಸಲಕರಣೆ, ಪ್ರಥಮ ಚಿಕಿತ್ಸೆ ಸೌಲಭ್ಯ ಇತ್ಯಾದಿ ಅವಶ್ಯ ಸಂಗತಿಗಳನ್ನು ಪೂರೈಸುವ ವ್ಯವಸ್ಥೆಯಾಗಬೇಕು ‘ ಎಂದು ಒತ್ತಾಯಿಸಿದ್ದಾರೆ.