ಕಲಬುರಗಿ: ಐಪಿಎಸ್ ಅಧಿಕಾರಿ ಅರುಣ್ ರಂಗರಾಜನ್ ಅವರೊಂದಿಗೆ ತನ್ನ ಪತ್ನಿ ಹೊಂದಿರುವ ಸಂಬಂಧವನ್ನು ಪ್ರಶ್ನಿಸಿದ್ದಕ್ಕೆ ಅಧಿಕಾರಿ ಜತೆ ಸೇರಿ ಪತ್ನಿ ಜೀವ ಬೆದರಿಕೆ ಹಾಕಿದ್ದಾಳೆ ಎಂದು ಆರೋಪಿಸಿ ಪೊಲೀಸ್ ಕಾನ್ಸ್ಟೆಬಲ್ಯೊಬ್ಬರು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆಂತರಿಕಾ ಭದ್ರತಾ ಘಟಕದ ಎಸ್ಪಿಯಾಗಿದ್ದ ಅರುಣ್ ರಂಗರಾಜನ್ ಹಾಗೂ ಎಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಅಧಿಕಾರಿ ವಿರುದ್ಧ ದೂರು ದಾಖಲಾಗಿದೆ. ಮಹಿಳೆಯ ಪತಿ ಕಂಟೆಪ್ಪ ದೂರು ದಾಖಲಿಸಿದ್ದಾರೆ.
ಎಸ್ಪಿ ಆಗಿದ್ದ ಅರುಣ್ ರಂಗರಾಜನ್ ಹಾಗೂ ಮಹಿಳಾ ಎಎಸ್ಐ ಒಂದೇ ಕಡೆ ಕೆಲಸ ಮಾಡಿದ್ದರು. ಇಬ್ಬರು ನಡುವಿನ ಸಂಬಂಧದ ಬಗ್ಗೆ ಒಂದೂವರೆ ತಿಂಗಳಿಂದ ಸಂಶಯ ಇತ್ತು. ಪತ್ನಿ ಸುಜಾತಾ ಇರುವಿಕೆಯ ಬಗ್ಗೆ ವಿಚಾರಿಸಿದಾಗ ಆಕೆ ಅರುಣ್ ಅವರೊಂದಿಗೆ ನಗರದ ಪಿಡಬ್ಲ್ಯುಡಿ ಕ್ವಾರ್ಟರ್ಸ್ನ ಮನೆಯಲ್ಲಿ ಇರುವುದು ಖಚಿತವಾಯಿತು. ಮನೆಗೆ ತೆರಳಿ ವಿಚಾರಿಸಿದಾಗ, ಇಬ್ಬರೂ ಸೇರಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
‘ಅರುಣ್ ಅವರು ನನ್ನ ಪತ್ನಿ ಮೊಬೈಲ್ಗೆ ಆಗಾಗ ಕರೆ ಮಾಡಿ, ಅಶ್ಲೀಲ ಸಂದೇಶ ಕಳುಹಿಸಿದ್ದರು. ಇದು ನನ್ನ ಗಮನಕ್ಕೆ ಬರುತ್ತಿದ್ದಂತೆ ಎಲ್ಲವನ್ನೂ ಅಳಿಸಿ ಹಾಕಿದ್ದಾಳೆ. ಮಕ್ಕಳ ಭವಿಷ್ಯಕ್ಕಾಗಿ ಬದಲಾಗುವಂತೆ ಹೇಳಿದರೂ ಕೇಳಲಿಲ್ಲ. ಮಾ 7ರಂದು ಸಂಶಯ ಬಂದು ಅರಣ್ ಅವರ ಮನೆಗೆ ತೆರಳಿದ್ದಾಗ ಇಬ್ಬರೂ ಅಲ್ಲಿಯೇ ಇದ್ದರು. ಉನ್ನತ ಅಧಿಕಾರಿಯಾಗಿ ಅಧೀನ ಸಿಬ್ಬಂದಿಯೊಂದಿಗೆ ಇಂತಹ ವರ್ತನೆ ಸರಿಯಲ್ಲ’ ಎಂದು ಕೂಗಾಡಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
‘ಹೆಚ್ಚಿಗೆ ಮಾತನಾಡಿದರೆ ಜೈಲಿಗೆ ಕಳುಹಿಸುತ್ತೇನೆ. ನಿನ್ನ ಮತ್ತು ಮಕ್ಕಳನ್ನು ಜೀವ ಸಹಿತ ಬಿಡುವುದಿಲ್ಲ ಎಂದು ರಾಡ್ ತೋರಿಸಿ ಜೀವ ಬೆದರಿಕೆ ಹಾಕಿದ್ದಾರೆ. ಪತ್ನಿ ಕೂಡ ಅಧಿಕಾರಿ ಹೇಳಿದಂತೆ ನಿನ್ನನ್ನು ಕೊಲ್ಲಿಸುತ್ತೇನೆ ಎಂದಿದ್ದಾಳೆ. ಜೀವ ಬೆದರಿಕೆ, ಅನ್ಯರೊಂದಿಗೆ ಸಂಬಂಧ, ಮಾನಹಾನಿ, ಮನೆಯಲ್ಲಿನ ಬಂಗಾರ ಕಳವು ಸೇರಿದಂತೆ ವಿವಿಧ ಆರೋಪಗಳಿಗಾಗಿ ದೂರು ದಾಖಲಿಸಲಾಗಿದೆ’ ಎಂದು ಹೇಳಿದ್ದಾರೆ.