ಕಲಬುರಗಿ: ಬಹು ದಿನಗಳ ಬೇಡಿಕೆಯಾಗಿದ್ದ ಕಲಬುರಗಿ-ಬೀದರ್ ಮಧ್ಯೆ ಮತ್ತೊಂದು ರೈಲಿಗೆ ರೈಲ್ವೆ ಇಲಾಖೆ ಅನುಮೋದನೆ ನೀಡಿದೆ. ಈ ಸಂಬಂಧ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಸಂಸದ ಡಾ. ಉಮೇಶ ಜಾಧವ್ ಅವರಿಗೆ ಪತ್ರ ಬರೆದು ಮಾಹಿತಿ ನೀಡಿದ್ದಾರೆ.
ಸದ್ಯಕ್ಕೆ ಒಂದೇ ಡೆಮು ರೈಲು ಇದ್ದು, ನಿತ್ಯ ಎರಡು ಬಾರಿ ಸಂಚರಿಸುತ್ತದೆ. ಹೊಸದಾಗಿ ಆರಂಭವಾಗುವ ಡೆಮು ರೈಲು ನಿತ್ಯ ಬೆಳಿಗ್ಗೆ 7.30ಕ್ಕೆ ಕಲಬುರಗಿಯಿಂದ ಹೊರಟು ಬೆಳಿಗ್ಗೆ 10.15ಕ್ಕೆ ಬೀದರ್ ತಲುಪುತ್ತದೆ. 10.30ಕ್ಕೆ ಬೀದರ್ನಿಂದ ಹೊರಟು ಮಧ್ಯಾಹ್ನ 1.20ಕ್ಕೆ ಕಲಬುರಗಿಗೆ ಮರಳುವುದು. 1.30ಕ್ಕೆ ಇಲ್ಲಿಂದ ಹೊರಟು ಸಂಜೆ 4.45ಕ್ಕೆ ಬೀದರ್ ತಲುಪಲಿದೆ. 5ಕ್ಕೆ ಬೀದರ್ನಿಂದ ಹೊರಟು ಸಂಜೆ 7.40ಕ್ಕೆ ಕಲಬುರಗಿಗೆ ಮರಳಲಿದೆ.
ರೈಲು ನಿಲುಗಡೆಗೆ ಅಸ್ತು: ಕಲಬುರಗಿ, ಶಹಾಬಾದ್, ವಾಡಿ ಹಾಗೂ ನಾಲವಾರ ರೈಲು ನಿಲ್ದಾಣಗಳಲ್ಲಿ ಪ್ರಮುಖ ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ರೈಲ್ವೆ ಇಲಾಖೆ ಒಪ್ಪಿಗೆ ನೀಡಿದೆ ಎಂದು ಸಂಸದ ಡಾ. ಉಮೇಶ ಜಾಧವ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಶಹಾಬಾದ್ನಲ್ಲಿ ಮುಂಬೈ-ನಾಗರಕೋಯಿಲ್ ಎಕ್ಸ್ಪ್ರೆಸ್, ಮುಂಬೈ-ತಿರುವನಂತಪುರ ಎಕ್ಸ್ಪ್ರೆಸ್ ರೈಲುಗಳಿಗೆ ನಿಲುಗಡೆಗೆ ಒಪ್ಪಿಗೆ ನೀಡಲಾಗಿದೆ. ಕಲಬುರಗಿ ರೈಲು ನಿಲ್ದಾಣದಲ್ಲಿ ಅಹ್ಮದಾಬಾದ್-ಚೆನ್ನೈ ಎಕ್ಸ್ಪ್ರೆಸ್, ಕೇವಾಡಿಯಾ-ಚೆನ್ನೈ ಎಕ್ಸ್ಪ್ರೆಸ್, ವಾಡಿ ನಿಲ್ದಾಣದಲ್ಲಿ ಮುಂಬೈ ಎಲ್ಟಿಟಿ-ಸಿಕಂದರಾಬಾದ್ ಎಕ್ಸ್ಪ್ರೆಸ್ ಹಾಗೂ ನಾಲವಾರದಲ್ಲಿ ಯಶವಂತಪುರ-ಲಾತೂರ್ ಎಕ್ಸ್ಪ್ರೆಸ್ ರೈಲಿನ ನಿಲುಗಡೆಗೆ ಒಪ್ಪಿಗೆ ನೀಡಿದೆ ಎಂದಿದ್ದಾರೆ.
ಮುಂಬೈ-ಸೋಲಾಪುರ ಮಧ್ಯೆ ಸಂಚರಿಸುತ್ತಿರುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಕಲಬುರಗಿವರೆಗೆ ವಿಸ್ತರಿಸಲು ರೈಲ್ವೆ ಸಚಿವರಿಗೆ ಮನವಿ ಮಾಡಿದ್ದೇನೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ
ಡಾ. ಉಮೇಶ ಜಾಧವ, ಸಂಸದ