ಬೆಳಗಾವಿ: ‘ಜಾಗತಿಕ ಲಿಂಗಾಯತ ಮಹಾಸಭೆ ಹಾಗೂ ಲಿಂಗಾಯತ ಮಠಾಧೀಶರ ಒಕ್ಕೂಟದ ಸಹಯೋಗದಲ್ಲಿ ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಮಾರ್ಚ್ 4 ಹಾಗೂ 5ರಂದು ರಾಷ್ಟ್ರೀಯ ಲಿಂಗಾಯತ ಅಧಿವೇಶನ ಹಮ್ಮಿಕೊಳ್ಳಲಾಗಿದೆ’ ಎಂದು ಗದಗ- ಡಂಬಳ ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.
ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಪಡೆಯುವುದು ನಮ್ಮ ಉದ್ದೇಶ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಅಧಿವೇಶನ ನಡೆಸಲಾಗುತ್ತಿದೆ. ನಮ್ಮ ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರಿಯಲಿದೆ’ ಎಂದರು.
‘ಲಿಂಗಾಯತ ಎನ್ನುವುದು ಈಗಾಗಲೇ ಸ್ವತಂತ್ರ ಧರ್ಮವೇ ಆಗಿದೆ. ನಾವೀಗ ಹೋರಾಡುತ್ತಿರುವುದು ಸರ್ಕಾರಿ ಮಾನ್ಯತೆ ಪಡೆಯುವುದಕ್ಕೆ ಮಾತ್ರ. ಕೆಲವರು ‘ವೀರಶೈವ ಲಿಂಗಾಯತ ಧರ್ಮ’ ಎಂಬ ಪದ ಜೋಡಿಸಿದ್ದಾರೆ. ಇದು ಸರಿಯಲ್ಲ. ವೀರಶೈವ ಪದವು ವೈದಿಕ ಸಂಪ್ರದಾಯದ್ದು. ಅದನ್ನು ಸೇರಿಸಿದರೆ ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಸಿಗುವುದಿಲ್ಲ’ ಎಂದೂ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.