ಬೆಳಗಾವಿ: ಕಳಸಾ ಬಂಡೂರಿ ವಿಷಯದಲ್ಲಿ ಗೋವಾ ಸರಕಾರ ತೆಗೆದುಕೊಂಡಿರುವ ನಿರ್ಣಯಕ್ಕೆ ಕವಡೆ ಕಾಸಿನ ಕಿಮ್ಮತ್ತೂ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗೋವಾ ನಾಯಕರಿಗೆ ಸ್ಪಷ್ಟವಾಗಿ ತಿರುಗೇಟು ನೀಡಿದರು.
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸೋಮವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು ಈಗಾಗಲೇ ಯೋಜನೆಯ ಸಮಗ್ರ ಪರಿಷ್ಕೃತ ವರದಿ ಗೆ ಅನುಮೋದನೆ ಸಿಕ್ಕಿದೆ.
ಅರಣ್ಯ ಇಲಾಖೆಯ ಒಪ್ಪಿಗೆ ಸಿಕ್ಕ ತಕ್ಷಣ ಕಾಮಗಾರಿಯನ್ನು ಕೈಗೊಳ್ಳಲಾಗುವದು ಎಂದು ಸ್ಪಷ್ಟಪಡಿಸಿದರು.
ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಮಹದಾಯಿ ನ್ಯಾಯಾಧೀಕರಣ ರಚನೆಯಾಗಿದೆ. 10 ವರ್ಷ ನ್ಯಾಯಾಧೀಕರಣದ ವಿಚಾರಣೆ ನಡೆದು ಆದೇಶ ಬಂದಿದೆ. ನ್ಯಾಯಾಧೀಕರಣದ ಆದೇಶ ಎಂದರೆ ಅದು ಸರ್ವೋಚ್ಚ ನ್ಯಾಯಾಲಯದ ತೀರ್ಪು ಇದ್ದಂತೆ. ಈ ಆದೇಶದ ಆಧಾರದ ಮೇಲೆ ನಾವು ಡಿಪಿಅರ್ ಮಾಡಿದ್ದೇವೆ. ಕಾನೂನು ಬದ್ಧವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.