ಪಣಜಿ: ಗೋವಾ ವಿಧಾನಸಭೆಯಲ್ಲಿ ಸೋಮವಾರ ಬೆಳಗ್ಗೆ ರಾಜ್ಯಪಾಲರ ಭಾಷಣದ ವೇಳೆ ಪ್ರತಿಪಕ್ಷಗಳಿಂದ ಗದ್ದಲ ಉಂಟಾಯಿತು. ಇದರ ನಂತರ, ಮಾರ್ಷಲ್ಗಳು ಧರಣಿ ನಿರತ ವಿರೋಧ ಪಕ್ಷದ ಶಾಸಕರನ್ನು ಸಭಾಂಗಣದಿಂದ ಹೊರಕ್ಕೆ ಕರೆದೊಯ್ದರು. ಪ್ರತಿಪಕ್ಷದ ಶಾಸಕರು ”ಸೇವ್ ಮಹದಾಯಿ ಸೇವ್ ಗೋವಾ” ಬ್ಯಾನರ್ ಗಳೊಂದಿಗೆ ಸದನದ ಬಾವಿಗಿಳಿದು ಬಂದು ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು.
ಮಹದಾಯಿ ಸಮಸ್ಯೆ ಮತ್ತು ಇತರ ವಿಷಯಗಳ ಕುರಿತು ಪ್ರತಿಪಕ್ಷಗಳು ಸರ್ಕಾರವನ್ನು ಸುತ್ತುವರಿಯಲು ಸಿದ್ಧವಾಗಿವೆ ಮತ್ತು ಸೋಮವಾರದಿಂದ ಪ್ರಾರಂಭಗೊಂಡಿರುವ ನಾಲ್ಕು ದಿನಗಳ ವಿಧಾನಸಭಾ ಅಧಿವೇಶನದ ಮುನ್ನಾ ದಿನದಂದು, ಕಾಂಗ್ರೆಸ್ನ ಯೂರಿ ಅಲೆಮಾವ್ ಮತ್ತು ಎಲ್ಟನ್ ಡಿ’ಕೋಸ್ಟಾ, ಎಎಪಿಯ ವೆಂಜಿ ವಿಗಾಸ್, ಕ್ರೂಜ್ ಸಿಲ್ವಾ ಮತ್ತು ಗೋವಾ ಫಾರ್ವರ್ಡ್ನ ವಿಜಯ್ ಸರ್ದೇಸಾಯಿ ಮಡಗಾಂವ್ನಲ್ಲಿ ಭೇಟಿಯಾದರು. ಅಧಿವೇಶನದಲ್ಲಿ ಮಹದಾಯಿ ವಿಚಾರವಾಗಿ ಸರ್ಕಾರವನ್ನು ಪೇಚಿಗೆ ಸಿಲುಕಿಸಲು ಹಾಗೂ ಅಧಿವೇಶನ ಕಲಾಪಕ್ಕೆ ಅಡ್ಡಿಯುಂಟು ಮಾಡಲು ಪ್ರತಿಪಕ್ಷಗಳು ತಂತ್ರ ರೂಪಿಸಿದ್ದವು ಎನ್ನಲಾಗಿದೆ.
ಮಹದಾಯಿ ಸಮಸ್ಯೆಯ ಕುರಿತು ಪ್ರಸಕ್ತ ಅಧಿವೇಶನದಲ್ಲಿ ಚರ್ಚಿಸಲು ಅವಕಾಶ ಲಭಿಸಬೇಕು ಈ ಹಿನ್ನೆಲೆಯಲ್ಲಿ ಅಧಿವೇಶನ ಕಾಲಾವಧಿಯನ್ನು ಹೆಚ್ಚಿಸಲು ಪ್ರತಿಪಕ್ಷಗಳು ಆಗ್ರಹಿಸಿದ್ದವು. ಆದರೆ ಅಧಿವೇಶನ ಕಾಲಾವಧಿ ವಿಸ್ತರಿಸದೆಯೇ ಕೇವಲ 4 ದಿನಗಳು ಮಾತ್ರ ಅಧಿವೇಶನ ಕಲಾಪ ನಡೆಸಲು ಸರ್ಕಾರ ನಿರ್ಧರಿಸಿದೆ. ಇದರಿಂದಾಗಿ ಪ್ರತಿಪಕ್ಷಗಳು ಮಹದಾಯಿ ವಿಷಯದಲ್ಲಿ ಅಧಿವೇಶನದ ಮೊದಲ ದಿನ ಸೋಮವಾರ ಆಕ್ರಮಣಕಾರಿಯಾದಂತೆ ಕಂಡುಬಂತು. ಪ್ರತಿಪಕ್ಷಗಳ ಶಾಸಕ ಸದನದ ಬಾವಿಗಿಳಿದು ಸೇವ್ ಮಹದಾಯಿ ಸೇವ್ ಗೋವಾ ಬ್ಯಾನರ್ ಹಿಡಿದು ಗದ್ದಲ ನಡೆಸಿದರು.