ಯಾದಗಿರಿ: ಮುಂಬೈನಿಂದ ಯಾದಗಿರಿ ಜಿಲ್ಲೆಗೆ ಎಂಟ್ರಿ ಕೊಟ್ಟು ಜಿಲ್ಲೆಯ ಜನರ ಮೇಲೆ ದಾಳಿ ಮಾಡಿದ್ದ ಕೊರೊನಾ 50ಕ್ಕೂ ಅಧಿಕ ಜನರ ಪ್ರಾಣ ಬಲಿ ಪಡೆದಿದೆ. ಈಗ ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹೊತ್ತಿನಲ್ಲಿ ಮತ್ತೆ, ಯಾದಗಿರಿಗೆ ಮುಂಬೈ ಕಂಟಕ ಎದುರಾಗಿದೆ.
ಇದಕ್ಕೆ ಪುಷ್ಟಿ ನೀಡುವಂತೆ, ಮುಂಬೈನಿಂದ ರಾಜ್ಯಕ್ಕೆ ಬಂದ ವ್ಯಕ್ತಿ ಓರ್ವ ನಾನು ಯಾವ ಟೆಸ್ಟ್ ಮಾಡಸಲ್ಲ ಏನು ಮಾಡತ್ತಿರಿ ಮಾಡಿಕೊಳ್ಳಿ ಎಂದು ಆರೋಗ್ಯ ಸಿಬ್ಬಂದಿ ಅವಾಜ್ ಹಾಕಿ ಉದ್ಧಟತನ ತೋರಿದ ಘಟನೆ ಯಾದಗಿರಿ ರೈಲು ನಿಲ್ದಾಣದಲ್ಲಿ ನಡೆದಿದೆ.
ಕೊರೊನಾ ಟೆಸ್ಟ್ ಮಾಡಿಸಲು ಹೊರ ರಾಜ್ಯದಿಂದ ಬಂದ ಪ್ರಯಾಣಿಕ ರೂಪೇಶ್ ಉದ್ಧಟತನ ತೋರಿದ ಪರಿಣಾಮ, ಕ್ಯಾತೆ ತೆಗೆದ ಪ್ರಯಾಣಿಕನ ಜೊತೆ ಇತರೇ ಪ್ರಯಾಣಿಕರು ಕೊರೊನಾ ಟೆಸ್ಟ್ ಮಾಡಿಸದೇ ಎಸ್ಕೇಪ್ ಆಗಿದ್ದಾರೆ. ಇಂದು ಮುಂಬೈನಿಂದ ಉದ್ಯಾನ ಎಕ್ಸ್ಪ್ರೆಸ್ ಮೂಲಕ ಜಿಲ್ಲೆಗೆ ಬಂದಿರುವ ರೂಪೇಶ್ ಮತ್ತು ಕುಟುಂಬಸ್ಥರು ಜೊತೆಗೆ ಬಂದಿರುವ ನೂರಾರು ಸಹ ಪ್ರಯಾಣಿಕರು, ತಪಾಸಣೆ ಮಾಡಿಸಿಕೊಳ್ಳದೆ ಹೊರಗೆ ಕಾಲ್ಕಿತ್ತಿದ್ದಾರೆ.
ಕೊರೊನಾ ಶಿಷ್ಟಾಚಾರ ಪಾಲಿಸುವಂತೆ ಆರೋಗ್ಯ ಇಲಾಖೆ ಸಿಬ್ಬಂದಿ ರೂಪೇಶ್ ಮತ್ತು ಕುಟುಂಬಸ್ಥರಿಗೆ ಎಷ್ಟೆ ಮನವಿ ಮಾಡಿದರೂ, ಅವರಿಂದ ಅಸಡ್ಡೆ ವರ್ತನೆ ಕಂಡು ಬಂದಿದೆ. ಅಲ್ಲದೆ ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ರೂಪೇಶ್ ಕುಟುಂಬಸ್ಥರು ಆರೋಗ್ಯ ಸಿಬ್ಬಂದಿ ಧಮ್ಕಿ ಹಾಕಿದ್ದಾರೆ. ತಪಾಸಣೆ ಮಾಡಿಸಿಕೊಳ್ಳದೆ ನೂರಾರು ಪ್ರಯಾಣಿಕರು ನಗರಕ್ಕೆ ನುಗ್ಗಿದ ಹಿನ್ನೆಲೆಯಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಾಗುವ ಆತಂಕ ಉಂಟಾಗಿದೆ.