ಹೈದರಾಬಾದ್: ಇಲ್ಲಿನ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿ ಯಲ್ಲಿ ತರಬೇತಿ ಪಡೆಯುತ್ತಿರುವ ಐಪಿಎಸ್ ಪ್ರೊಬೇಷನರಿಯೊಬ್ಬರು, ಸಹ ತರಬೇತಿ ಅಧಿಕಾರಿ ನೀಡಿರುವ ಕಿರುಕುಳ ಆರೋಪಗಳ ನಡುವೆಯೇ ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ತರಬೇತಿ ಅಧಿಕಾರಿ ಉದಯ ಕೃಷ್ಣ ರೆಡ್ಡಿ ಅವರು ಭಾನುವಾರ ಸಂಜೆ ನಗರದ ತಮ್ಮ ಸ್ನೇಹಿತರೊಬ್ಬರ ನಿವಾಸದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಶಂಕೆ ವ್ಯಕ್ತವಾಗಿದೆ. ಆದ್ರೆ ಇದು ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶವಾಗಿತ್ತೇ ಅನ್ನೋದು ಇನ್ನೂ ದೃಢವಾಗಿಲ್ಲ. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದಾರೆ.
ಖಾಸಗಿ ವಿಡಿಯೋ ಚಿತ್ರೀಕರಿಸಿದ ಆರೋಪ
ಕೆಲ ದಿನಗಳ ಹಿಂದೆ ಸಹ ಐಪಿಎಸ್ ಪ್ರೊಬೇಷನರ್ ಮಹಿಳಾ ಅಧಿಕಾರಿ ನೀಡಿದ ದೂರಿನ ಆಧಾರದ ಮೇಲೆ ಉದಯ ಕೃಷ್ಣ ರೆಡ್ಡಿ ವಿರುದ್ಧ ಹೈದರಾಬಾದ್ ಪೊಲೀಸರು ಪ್ರಕರಣ ದಾಖಲಿಸಿದ್ದರು. ದೂರಿನಲ್ಲಿ, ಅವರು ತನ್ನನ್ನ ಹಿಂಬಾಲಿಸಿದ್ದು, ಹಲ್ಲೆ ನಡೆಸಿದ್ದು, ಜೀವ ಬೆದರಿಕೆ ಹಾಕಿದ್ದು ಹಾಗೂ ತನ್ನ ಅನುಮತಿ ಇಲ್ಲದೇ ಖಾಸಗಿ ವಿಡಿಯೊವನ್ನು ರಹಸ್ಯವಾಗಿ ಚಿತ್ರೀಕರಿಸಿದ್ದಾರೆ ಎಂದು ಆರೋಪಿಸಲಾಗಿತ್ತು.
ಈ ದೂರಿನ ಆಧಾರದ ಮೇಲೆ ಭಾರತೀಯ ನ್ಯಾಯ ಸಂಹಿತೆ (BNS)ಯ ವಿವಿಧ ಕಲಂಗಳು ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ (IT Act) ಯ ಸಂಬಂಧಿತ ವಿಧಿಗಳಡಿ ಪ್ರಕರಣ ದಾಖಲಾಗಿತ್ತು. ಆದರೆ ವಿಷ ಸೇವಿಸಿದ ಘಟನೆ ಬಳಿಕ ಪತ್ತೆಯಾದ 2 ಪುಟಗಳ ಪತ್ರದಲ್ಲಿ ಉದಯ ಕೃಷ್ಣ ರೆಡ್ಡಿ, ತಮ್ಮ ಮೇಲಿನ ಆರೋಪಗಳನ್ನ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.
ಅತಿಯಾದ ಲೈಂಗಿಕ ಆಸೆಯಿಂದ ಅಪ್ಪಿ ಚುಂಬಿಸಿದ್ದಳು
ಜೂನ್ 2025 ರಿಂದ ತಾವು ಹಾಗೂ ದೂರುದಾರೆಯ ನಡುವೆ ಪರಸ್ಪರ ಒಪ್ಪಿಗೆಯ ಪ್ರೇಮ ಸಂಬಂಧವಿತ್ತು ಎಂದು ಅವರು ಹೇಳಿದ್ದಾರೆ. ಮಹಿಳೆಯ ವಿವಾಹವಾದ ನಂತರವೂ ದೈಹಿಕ ಹಾಗೂ ಭಾವನಾತ್ಮಕ ಸಂಬಂಧ ಮುಂದುವರಿದಿತ್ತು ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೇ, ಆಕೆ ಹಲವು ಬಾರಿ ತನ್ನ ರೂಮಿಗೆ ಬಂದು ಖಾಸಗಿ ಕ್ಷಣಗಳನ್ನ ಕಳೆಯುತ್ತಿದ್ದಳು ಎಂದು ಹೇಳಿಕೊಂಡಿದ್ದಾರೆ. 2026ರ ಜುಲೈ 9ರಂದು ಆಕೆಗೆ ತೀವ್ರ ಲೈಂಗಿಕ ಆಸೆ ಉಂಟಾಗಿದೆ ಎಂದು ಹೇಳಿ ನನ್ನ ಕೊಠಡಿಗೆ ಬಂದಳು. ನನ್ನ ಅನುಮತಿ ಕೇಳದೇ ನನ್ನನ್ನ ಚುಂಬಿಸಿ ಅಪ್ಪಿಕೊಂಡಿದ್ದಳೆಂದೂ ತಮ್ಮ ಪತ್ರದಲ್ಲಿ ಬರೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಇದಲ್ಲದೆ, ಕೆಲವು ಘಟನೆಗಳನ್ನ ಸಾಕ್ಷ್ಯವಾಗಿ ದಾಖಲಿಸಿಕೊಂಡಿದ್ದೆ ಮತ್ತು ಬಳಿಕ ಆ ವಿಡಿಯೊವನ್ನು ಮಹಿಳೆಯ ಪತಿಗೆ ಕಳುಹಿಸಿದ್ದೆ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ. ನಂತರ ದೂರುದಾರೆ ಎಲ್ಲವನ್ನೂ ತಿರುಚಿ ತಮ್ಮ ವಿರುದ್ಧ ಸುಳ್ಳು ಹಲ್ಲೆ ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನೊಂದೆಡೆ, ಮಹಿಳಾ ಅಧಿಕಾರಿ ತಮ್ಮ ದೂರಿನಲ್ಲಿ ಉದಯ ಕೃಷ್ಣ ರೆಡ್ಡಿ ಲೈಂಗಿಕ ಸ್ವರೂಪದ ನಿಂದನಾತ್ಮಕ ಸಂದೇಶಗಳನ್ನು ಕಳುಹಿಸಿದ್ದರು, ಬಲವಂತವಾಗಿ ತಮ್ಮ ಮೊಬೈಲ್ ಫೋನ್ ಪರಿಶೀಲಿಸಿದ್ದರು, ಹಲವು ಬಾರಿ ದೈಹಿಕ ಹಲ್ಲೆ ನಡೆಸಿದ್ದರು ಹಾಗೂ ತಮ್ಮ ಅನುಮತಿ ಇಲ್ಲದೆ ಖಾಸಗಿ ವಿಡಿಯೊವನ್ನು ರಹಸ್ಯವಾಗಿ ಚಿತ್ರೀಕರಿಸಿದ್ದರು ಎಂದು ಆರೋಪಿಸಿದ್ದಾರೆ. ಜೊತೆಗೆ ತಮ್ಮ ಮಾನಹಾನಿಗೆ ಯತ್ನಿಸಿ, ಬ್ಲ್ಯಾಕ್ಮೇಲ್ ಮಾಡಲು ಪ್ರಯತ್ನಿಸಿದ್ದಾರೆ ಎಂದೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಪ್ರಕರಣದ ಎಲ್ಲ ಆರೋಪಗಳ ಕುರಿತು ತನಿಖೆ ಮುಂದುವರಿದಿದ್ದು, ಸಂಗ್ರಹವಾಗುವ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
Laxmi News 24×7