ಬೆಂಗಳೂರು: ಮೆಜೆಸ್ಟಿಕ್ ಬಸ್ ನಿಲ್ದಾಣ ಹಾಗೂ ರೈಲು ನಿಲ್ದಾಣಕ್ಕೆ ಹೊಂದಿಕೊಂಡಿರುವ ಸುರಂಗ ಮಾರ್ಗದಲ್ಲಿ ‘ಅಕ್ರಮ’ ವ್ಯಾಪಾರ ಜೋರಾಗಿದ್ದು, ಇದನ್ನು ಪ್ರಶ್ನಿಸುವ ಜನರ ಮೇಲೆ ವ್ಯಾಪಾರಿಗಳು ಹಲ್ಲೆ ಮಾಡುತ್ತಿದ್ದಾರೆ. ತಮ್ಮದೇ ಗುಂಪು ಕಟ್ಟಿಕೊಂಡು ಚಾಕು- ಚೂರಿ ತೋರಿಸಿ ಕೊಲೆ ಬೆದರಿಕೆಯೊಡ್ಡುತ್ತಿರುವ ದೂರುಗಳು ಹೆಚ್ಚಾಗಿವೆ.
ನಿಲ್ದಾಣಕ್ಕೆ ಬಂದು ಹೋಗುವ ಜನರ ಸಂಚಾರಕ್ಕೆ ಅನುಕೂಲವಾಗಲೆಂದು ಸುರಂಗ ಮಾರ್ಗ ನಿರ್ಮಿಸಲಾಗಿದ್ದು, ‘ಕಡ್ಡಾಯವಾಗಿ ಸುರಂಗ ಮಾರ್ಗ ಬಳಸಿ’ ಎಂಬ ನಾಮಫಲಕಗಳನ್ನು ನೇತುಹಾಕಲಾಗಿದೆ. ಆದರೆ, ಜನರು ಓಡಾಡುವ ಸ್ಥಳವನ್ನೇ ಅತಿಕ್ರಮಿಸಿಕೊಂಡುವ್ಯಾಪಾರಿಗಳು ವಹಿವಾಟು ನಡೆಸು ತ್ತಿರುವ ಆರೋಪಗಳು ಕೇಳಿಬರುತ್ತಿವೆ.
ಹಲವು ವರ್ಷಗಳಿಂದ ನಡೆಯುತ್ತಿದ್ದ ಅಕ್ರಮ ವ್ಯಾಪಾರ ಪ್ರಶ್ನಿಸಿ ರವಿಕುಮಾರ್ ಕಂಚನಹಳ್ಳಿ ಎಂಬುವವರು ಹೈಕೋರ್ಟ್ನಲ್ಲಿ ದಾವೆ ಹೂಡಿದ್ದರು. ವಿಚಾರಣೆ ನಡೆಸಿದ್ದ ಹೈಕೋರ್ಟ್, ‘ಮೆಜೆಸ್ಟಿಕ್ನ ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮ ವ್ಯಾಪಾರಕ್ಕೆ ಅವಕಾಶ ನೀಡಬಾರದು’ ಎಂದು ಬಿಬಿಎಂಪಿಗೆ ಸೂಚಿಸಿ 2019ರ ಆಗಸ್ಟ್ 27ರಂದು ಆದೇಶ ಹೊರಡಿಸಿತ್ತು. ಎಚ್ಚೆತ್ತ ಬಿಬಿಬಿಎಂಪಿ ಅಧಿಕಾರಿಗಳು, ಅನಧಿಕೃತ ಅಂಗಡಿಗಳನ್ನು ತೆರವು ಮಾಡಿದ್ದರು.