ತುಮಕೂರು: ಒಕ್ಕಲಿಗ, ಲಿಂಗಾಯತ ಸಮುದಾಯದ ಮೀಸಲಾತಿ ಸಂಬಂಧ ಪ್ರವರ್ಗ ಬದಲಾವಣೆ ಮಾಡುವ ಮೂಲಕ ‘ರಂಗನ ಮಂಗ ಮಾಡಲು’ ಬಿಜೆಪಿಯವರು ಹೊರಟಿದ್ದಾರೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಇಲ್ಲಿ ಶುಕ್ರವಾರ ವ್ಯಂಗ್ಯವಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಪ್ರವರ್ಗ ಬದಲಾವಣೆ ಮಾಡಿರುವುದರಿಂದ ಎರಡೂ ಸಮುದಾಯಗಳಿಗೂ ಯಾವುದೇ ಪ್ರಯೋಜನವಿಲ್ಲ. ಇದರಿಂದ ಮೀಸಲಾತಿ ಪ್ರಮಾಣದಲ್ಲಿ ಯಾವುದೇ ಹೆಚ್ಚಳ ಆಗುವುದಿಲ್ಲ. ಪ್ರವರ್ಗ ಬದಲಾವಣೆ ಮಾಡಿರುವುದೇ ಸಾಧನೆ. ಈವರೆಗೆ ಮೂಗಿಗೆ ತಪ್ಪ ಹಚ್ಚುತ್ತಿದ್ದವರು, ಈಗ ಹಣೆಗೆ ಹಚ್ಚಿದ್ದಾರೆ. ಇದನ್ನು ಪ್ರಚಾರಕ್ಕಾಗಿ ಮಾಡಿದ್ದಾರೆ’ ಎಂದು ಆರೋಪಿಸಿದರು.
‘ಆರ್ಥಿಕವಾಗಿ ಹಿಂದುಳಿದವರಿಗೆ (ಇಡಬ್ಲ್ಯುಎಸ್) ನೀಡುವ ಮೀಸಲಾತಿ ಪ್ರಮಾಣವನ್ನು ಹಂಚಿಕೆ ಮಾಡಿದ ನಂತರ ಉಳಿದದ್ದನ್ನು, ಒಕ್ಕಲಿಗರು, ಲಿಂಗಾಯತರಿಗೆ ನೀಡಲಾಗುವುದು. ಈ ಬಗ್ಗೆ ಎರಡು ತಿಂಗಳಲ್ಲಿ ವರದಿ ಪಡೆದು, ನಂತರ ಮೀಸಲಾತಿ ಹೆಚ್ಚಳ ಮಾಡಲು ನಿರ್ಧರಿಸಲಾಗುವುದು’ ಎಂದು ಹೇಳಿದ್ದಾರೆ. ಈ ವರದಿ ಬರುವ ವೇಳೆಗೆ ಸರ್ಕಾರವೇ ಇರುವುದಿಲ್ಲ. ನಾವೂ ಮೀಸಲಾತಿ ಕೊಟ್ಟಿದ್ದೇವೆ, ಪ್ರವರ್ಗ ಬದಲಾವಣೆ ಮಾಡಿದ್ದೇವೆ ಎಂಬ ಭಾವನೆ ಮೂಡಿಸಿ, ಚುನಾವಣೆ ಸಮಯದಲ್ಲಿ ಜನರನ್ನು ಮರಳು ಮಾಡುವುದಾಗಿದೆ ಎಂದು ಟೀಕಿಸಿದರು.