ವಿಜಯಪುರ: ಮಾಜಿ ಮಹಾನಗರ ಪಾಲಿಕೆ ಬಿಜೆಪಿ ಕಾರ್ಪೊರೆಟರ್ ಮೇಲೆ ಪೊಲಿಸರು ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ವಿಜಯಪುರ ಮಹಾನಗರ ಪಾಲಿಕೆ ಮಾಜಿ ಸದಸ್ಯ ಪ್ರಕಾಶ ಮಿರ್ಜಿ ಪೊಲಿಸರ ವಿರುದ್ದ ಆರೋಪ ಮಾಡಿದ್ದಾರೆ.
ವಿಜಯಪುರ ನಗರ ಗಾಂಧಿಚೌಕ್ ಹಾಗೂ ಸಂಚಾರಿ ಠಾಣೆಯ ಎ.ಎಸ್.ಐ. ಹಾಗೂ ಹೆಡ್ ಕಾನ್ಸಟೇಬಲ್ ನಿಂದ ಭಾನುವಾರ ಸಂಜೆ ತಮ್ಮ ಮೇಲೆ ಹಲ್ಲೆ ನಡೆಸಿ ಕಾಲು ಮುರಿದಿದ್ದಾರೆ ಎಂದು ಪ್ರಕಾಶ ಮಿರ್ಜಿ ಆರೋಪಿಸಿದ್ದಾರೆ.
ಮಹಿಳೆಯೊಬ್ಬರು ಮಾಸ್ಕ್ ಹಾಕದ ಕಾರಣಕ್ಕೆ ದಂಡ ವಿಧಿಸುತ್ತಿದ್ದಾಗ ಸದರಿ ಮಹಿಳೆ ಪ್ರಕಾಶ ಮಿರ್ಜಿಗೆ ಮೊಬೈಲ್ ಕರೆ ಮಾಡಿ ಬೆಂಬಲಕ್ಕೆ ಬರುವಂತೆ ಕೋರಿದ್ದಾಳೆ. ಇದರಿಂದ ಸ್ಥಳಕ್ಕೆ ಧಾವಿಸಿದ ಮಾಜಿ ಕಾರ್ಪೋರೆಟರ್ ದಂಡ ವಿಧಿಸಿದ್ದನ್ನು ಪ್ರಶ್ನಿಸಿದ್ದಾರೆ.
ಈ ಹಂತದಲ್ಲಿ ಸ್ಥಳದಲ್ಲಿದ್ದ ಮಹಿಳಾ ಪಿ.ಎಸ್.ಐ.
ಚೌರ ಎಂಬವರು ದಂಡ ವಿಧಿಸಲ್ಪಟ್ಟ ಮಹಿಳೆಯ ಎದೆಯ ಮೇಲಿನ ಬಟ್ಟೆ ಹಿಡಿದು ಎಳೆದಿದ್ದು, ಇದಕ್ಕೆ ಪ್ರಕಾಶ ಮಿರ್ಜಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅಗ ಪಿ.ಎಸ್.ಐ. ನೀವು ಕೂಡಾ ಮಹಿಳೆಯಾಗಿ, ಇನ್ನೊಬ್ಬ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿ ದೌರ್ಜನ್ಯ ಮಾಡಿದ್ದು ಸರಿಯಲ್ಲ ಎಂದು ಆಕ್ಷೇಪಿಸಿದ್ದಾರೆ.
ನಾನು ಮಾಜಿ ಕಾರ್ಪೋರೇಟರ್ ಎಂದು ತಿಳಿದು ಕೂಡ ಪೊಲೀಸರು ನನ್ನ ಮೇಲೆ ಮನಬಂದಂತೆ ಹಲ್ಲೆ ಮಾಡಿ, ದೌರ್ಜನ್ಯ ಎಸಗಿದ್ದರಿಂದ ಕಾಲು ಮುರಿದಿದೆ ಎಂದು ದೂರಿದ್ದಾರೆ.
ಪೊಲೀಸರು ನನ್ನ ಮೇಲೆ ದಬ್ಬಾಳಿಕೆ ಮಾಡಿದ, ಕಾಲರ್ ಶರ್ಟ್ ಹಿಡಿದು ಗಾಂಧಿಚೌಕ್ ಠಾಣೆಗೆ ಎಳೆದುಕೊಂಡು ಹೋಗಿ, ಠಾಣೆಯಲ್ಲಿ ಕೂಡಿಹಾಕಿ ಹೊಡೆದಿದ್ದಾರೆ. ಪೊಲೀಸರು ಲಾಠಿಯಿಂದ ಕಾಲಿಗೆ ಮನಬಂದಂತೆ ಥಳಿಸಿದ್ದರಿಂದ ನನ್ನ ಕಾಲಿಗೆ ಭಾರಿ ಪೆಟ್ಟಾಗಿ ಮುರಿದಿದೆ. ನನ್ನ ಮೇಲೆ ಠಾಣೆಯಲ್ಲಿ ಜರುಗಿದ ದೌರ್ಜನ್ಯದ ಇಡೀ ಪ್ರಕರಣ ದೃಶ್ಯ ಸಿಸಿ ಟಿವಿಯಲ್ಲಿ ದಾಖಲಾಗಿದ್ದು ಫುಟೇಜ್ ಪರಿಶೀಲಿಸಬೇಕು. ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ನನಗೆ ಕಾಲಿನ ರಕ್ತ ಸಂಚಲನ ಸ್ಥಗಿತವಾಗಿದೆ ಎಂದು ವೈದ್ಯರು ಎಂಆರ್ ಐ ವರದಿಯಲ್ಲಿ ತಿಳಿಸಿದ್ದಾರೆ.
ಖಾಸಗಿ ಆಸ್ಪತ್ರೆಯಿಂದ MLC ಮಾಡಿಸಿ ವರದಿ ಠಾಣೆಗೂ ಕಳಿಸಿದ್ದೇನೆ. ಎಸ್ಪಿ ಅವರಿಗೆ ಮನವಿ ಕಳಿಸಿದ್ದರೂ ಪೊಲಿಸರು ತಪ್ಪಿತಸ್ತರ ಪೊಲೀಸರ ವಿರುದ್ಧ ಪ್ತಕರಣ ದಾಖಲಿಸಿಕೊಂಡು ತನಿಖೆಗೆ ಮುಂದಾಗಿಲ್ಲ ಎಂದು ಥಳಿತಕ್ಕೊಳಗಾದ ಮಾಜಿ ಕಾರ್ಪೋರೇಟರ್ ಪ್ರಕಾಶ ಮಿರ್ಜಿ ಆರೋಪಿಸಿದ್ದಾರೆ.